ನೆಲ, ಜಲ, ಭಾಷೆ ವಿಚಾರದಲ್ಲಿ ಕರವೇ ಹೋರಾಟಕ್ಕೆ ಸದಾ ಸಿದ್ಧ

KannadaprabhaNewsNetwork | Published : Feb 17, 2025 12:33 AM

ಸಾರಾಂಶ

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಜರುಗಿದ ಕರವೇ ಸಂಘಟನಾ ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆದೇಶ ಪ್ರತಿ ನೀಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರಾಜ್ಯದಲ್ಲಿನ ಭಾಷೆ, ನೆಲ, ಜಲದ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎಂದೆಂದೂ ನಿರಂತರ ಕನ್ನಡಿಗರ ಪರವಾಗಿ ಎಂತಹ ಹೋರಾಟಕ್ಕೂ ಸಜ್ಜಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕದ ಬಳಿಕ ಆದೇಶ ವಿತರಿಸಿ ಮಾತನಾಡಿದರು. ನೂತನ ಪದಾಧಿಕಾರಿಗಳು ಜಿಲ್ಲೆಯಲ್ಲಿ ಸಂಘಟನೆ ಸದೃಢವನ್ನಾಗಿಸುವಲ್ಲಿ ಪಣತೊಡಬೇಕು. ರಾಜ್ಯದ ನೆಲ,ಜಲ, ಭಾಷೆಗೆ ಅನ್ಯಾಯವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಒಕ್ಕೂರಲಿನ ಧ್ವನಿಯ ಮೂಲಕ ಅಸ್ಮಿತೆಗಾಗಿ ಹೋರಾಡಲಿದೆ ಎಂದರು. ಈ ಸಂಘಟನೆ ಜಿಲ್ಲೆಯಲ್ಲಿ ಬಲಿಷ್ಠವಾಗಿ ನೆಲೆಯೂರಿದ್ದು, ಈ ಭಾಗದ ಜನತೆಯ ಸಮಸ್ಯೆಗಳಿಗೆ ಇನ್ನೂ‌ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವಂತಾಗಬೇಕು, ಗಡಿಯಂಚಿನ ಸಮಸ್ಯೆ, ಕನ್ನಡಿಗರಿಗೆ ಅನ್ಯಾಯ, ಸೇರಿದಂತೆ ನಾನಾ ಸಮಸ್ಯೆಗಳಿಗೆ ನೂತನ ಪದಾಧಿಕಾರಿಗಳು ಬೆಳಕು ಚಲ್ಲಿ ಸಂಘಟನೆ ಬಲವರ್ಧನೆಗೆ ಪಣ ತೊಡಬೇಕು. ಕರವೇ ಜಾತಿ, ಧರ್ಮಮೀರಿದ ಸಂಘಟನೆಯಾಗಿದ್ದು ಇಲ್ಲಿನ ಅನೇಕ ಗೊಂದಲಗಳು ಬಗೆಹರಿದಿದೆ ಎಂದರು.

ಟೌನ್ ಅಧ್ಯಕ್ಷರಾಗಿ ಜಗದೀಶ ಶಾಸ್ತ್ರೀ ನೇಮಕ:

ಕೊಳ್ಳೇಗಾಲ ಟೌನ್ ಘಟಕದ ಅಧ್ಯಕ್ಷರಾಗಿ ಜಗದೀಶ್ ಶಾಸ್ತ್ರೀ , ಜಿಲ್ಲಾ ಯುವ ಘಟಕದ ಸಂಚಾಲಕರಾಗಿ ಅಯಾಜ್ ಇನ್ನಿತರನ್ನು ನೇಮಕಮಾಡಿ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆದೇಶ ಹೊರಡಿಸಿದರು. ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಸಮೀಷರೀಪ್, ಗೌರವ ಸಲಹೆಗಾರ ಅಣಗಳ್ಳಿ ಬಸವರಾಜು, ತಾಲೂಕು ಮಹಿಳಾ ಅಧ್ಯಕ್ಷೆ ವಿಜಯ ರಾಣಿ , ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ರಾಜ್ಯ ಉಪಾಧ್ಯಕ್ಷ ಮಂಜೇಶ್ ಕುಮಾರ್, ಶಿವರಾಜಗೌಡ, ಜಿಲ್ಲಾಧ್ಯಕ್ಷ ಮೋಹನ್, ಕಾರ್ಯದರ್ಶಿ ರಿಯಾಜ್ ಪಾಷ, ದೊಡ್ಡಿಂದುವಾಡಿ ಸಿದ್ದರಾಜು ಇನ್ನಿತರರಿದ್ದರು.

Share this article