ಕನ್ನಡಪ್ರಭ ವಾರ್ತೆ ವಿಜಯಪುರ
ಪಹಲ್ಗಾಮನಲ್ಲಿ ಭಯೋತ್ಪಾದಕರು ನಡೆಸಿದ ನರಮೇಧ ಹೀನ ಕೃತ್ಯವಾಗಿದೆ. ಇಂತಹ ಉಗ್ರರನ್ನು, ಹೇಡಿ ಭಯೋತ್ಪಾದಕರನ್ನು ಶಾಶ್ವತ ನಿರ್ಣಾಮ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ಕೇಂದ್ರ ಸರಕಾರ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಶಕ್ತಿ ಪ್ರಯೋಗಿಸಿ, ಹೀನ ಕೃತ್ಯವೆಸಗುತ್ತಿರುವ ರಣ ಹೇಡಿ ಭಯೋತ್ಪಾದಕರನ್ನು ಶಾಶ್ವತವಾಗಿ ನಿರ್ನಾಮಕ್ಕೆ ಯೋಜನೆ ರೂಪಿಸಬೇಕು. ಅವರನ್ನು ಪಾಲನೆ ಮಾಡುತ್ತಿರುವ ನಮ್ಮ ದೇಶದ ಅನ್ನ ತಿಂದು ದೇಶಕ್ಕೆ ಅನ್ಯಾಯ ಮಾಡುತ್ತಿರುವ ಕುಟುಂಬಗಳನ್ನು ಹುಡುಕಿ ದೇಶದಿಂದ ಗಡಿಪಾರು ಮಾಡಬೇಕು. ಇಂತಹ ಹೀನ ಕೃತ್ಯದಲ್ಲಿ ಪಾಕಿಸ್ತಾನ ಸೇನೆ ಹಾಗೂ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡ ಇರುವ ಶಂಕೆ ಇದೆ. ದೇಶದ ನಾಗರಿಕರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ತಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಜಗತ್ತು, ಭಾರತ ದೇಶ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡುತ್ತಿದೆ. ದೇಶದ ಅಮಾಯಕ ಸಹೋದರರನ್ನು ಪತ್ನಿ ಹಾಗೂ ಮಕ್ಕಳ ಮುಂದೆ ಗುಂಡಿಕ್ಕಿ ಕೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಕೃತ್ಯವೆಸಗಿರುವ ದುಷ್ಟ ಪಾತಕಿಗಳನ್ನು ಹಾಗೂ ಇವರ ಹಿಂದಿರುವ ದುಷ್ಟ ಶಕ್ತಿಗಳನ್ನು ಹುಡುಕಿ ಮಟ್ಟ ಹಾಕುವ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಪದಾಧಿಕಾರಿಗಳಾದ ಗಿರೀಶ ಕಲಘಟಗಿ, ಲಿಂಗರಾಜ ಬಿದರಕುಂದಿ, ಸಂಕೇಶ ಪಟ್ಟಣದ, ಪ್ರಭು ಮಂಕಣಿ, ಶಿವರಾಜ ಕುಂಬಾರ, ಡಾ.ಎಂ.ಆರ್ ಗುರಿಕಾರ, ಬಾವಾಸಾಬ ಹತ್ತರಕಿಹಾಳ, ಮಾಳಪ್ಪ ಡಪ್ಪಿನ, ಟಿ.ಎಸ್.ಪಾಟೀಲ, ಶಿವಾನಂದ ಸುತ್ತುಗುಂಡಿ, ನೀಲಾ ಕಾಳೆ, ಸುಶೀಲಾ ಮಿಣಜಿಗಿ, ಭಾಗ್ಯಶ್ರೀ ಮಿಣಜಿಗಿ ಸೇರಿ ಹಲವರು ಉಪಸ್ಥಿತರಿದ್ದರು.