ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ರಾಜ್ಯದ ಖಾಸಗಿ ಕೈಗಾರಿಕೆ ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ : ಕರವೇ ಪ್ರತಿಭಟನೆ

KannadaprabhaNewsNetwork | Updated : Jul 20 2024, 11:54 AM IST

ಸರ್ಕಾರವು ಖಾಸಗಿ ಕಂಪನಿಗಳ ಆಕ್ಷೇಪಕ್ಕೆ ಮಣಿದು ಈ ಮಸೂದೆಯನ್ನು ಅಂಗೀಕರಿಸಲು ಇನ್ನೂ ಸಮಗ್ರ ಚರ್ಚೆ ಅವಶ್ಯಕತೆ ಇದೆ ಎಂದು ಮಸೂದೆ ತಡೆಹಿಡಿದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.

  ಬೀದರ್ : ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75ರಷ್ಟು ಮೀಸಲಾತಿ ಕಡ್ಡಾಯಗೊಳಿಸಿರುವ ಕರಡು ಮಸೂದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ಅದನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬೀದರ್‌ನಲ್ಲಿ ಕರವೇ ಪ್ರತಿಭಟನೆ ನಡೆಸಿತು.

ಶುಕ್ರವಾರ ನಗರದ ಡಾ.ಅಂಬೆಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಸಂಪುಟ ಸಭೆಯಲ್ಲಿ ಅನುಮೋದನೆಯಾಗಿದ್ದ ಕರಡು ಮಸೂದೆಗೆ ಉದ್ಯಮ ರಂಗದ ಪ್ರಮುಖರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಖಾಸಗಿ ಕಂಪನಿಗಳ ಆಕ್ಷೇಪಕ್ಕೆ ಮಣಿದು ಈ ಮಸೂದೆಯನ್ನು ಅಂಗೀಕರಿಸಲು ಇನ್ನೂ ಸಮಗ್ರ ಚರ್ಚೆ ಅವಶ್ಯಕತೆ ಇದೆ ಎಂದು ಮಸೂದೆ ತಡೆಹಿಡಿದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.

ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಶಾಲೆಯಲ್ಲಿ ಕಲಿತು ಬಂದ ಪ್ರತಿಭಾನ್ವಿತರೂ ಕೂಡ ಇಲ್ಲಿ ಕೆಲಸ ವಂಚಿತರಾಗುತ್ತಿದ್ದಾರೆ ಮತ್ತು ಅವರಿಗೂ ಮನ್ನಣೆ ಸಿಗಬೇಕು ಎಂಬುವುದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಲೋಚನೆ ಸರಿಯಿದೆ. ಆದರೆ ಖಾಸಗಿ ವಲಯದ ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಮುಂತಾದ ಉದ್ದಿಮೆದಾರರು ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಖಾಸಗಿ ಉದ್ದಿಮೆ ಕಂಪನಿಗಳ ಮಾಲೀಕರ ಕನ್ನಡ ವಿರೋಧಿ ನೀತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಆಂಧ್ರ, ಹರಿಯಾಣ ರಾಜ್ಯಗಳಲ್ಲೂ ಸಹ ಸ್ಥಳಿಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಿವೆ. ಕರ್ನಾಟಕ ಸರ್ಕಾರ ಸರೋಜಿನ ಮಹಿಷಿ ಪರಿಷ್ಕೃತ ವರದಿ ಜಾರಿಗೊಳಿಸಲು ಮೀನ-ಮೇಷ ಎಣಿಸುತ್ತಿದ್ದು, ಇದಕ್ಕಾಗಿ ಸಂಘಟನೆಗಳು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾವೆ.

ಈ ನೆಲದ ಜಾಗ, ನೀರು ಎಲ್ಲ ಸವಲತ್ತುಗಳು ರಿಯಾಯತಿ ದರದಲ್ಲಿ ಬಳಸಿಕೊಂಡ ಕಂಪನಿಗಳು ನಾಡ ದ್ರೋಹ ಕಾರ್ಯ ಎಸಗುತ್ತಿವೆ. ಸ್ಥಳಿಯರಿಗೆ ಉದ್ಯೋಗ ಮೀಸಲಾತಿ ಕೊಡದೆ ಇರುವುದು ಮತ್ತು ಕನ್ನಡಿಗರಿಗೆ. ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುತ್ತಿರುವುದು ವಿರೋಧವಾದ ಧೋರಣೆ ಕೈಗೊಂಡಿದೆ. ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಘಟನೆ ಬೆಂಬಲ ವ್ಯಕ್ತಪಡಿಸುತ್ತ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಪೀಟರ್ ಚೀಟಗುಪ್ಪಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನೀತಾ ಸಿ.ಬಿ. ಮರಕ, ಸೈಯದ್ ನವಾಜ್. ಜಗನಾಥ್ ಕೌಠಾ. ಬಿ, ಮೊಸಿನ್ ಪಟೇಲ್, ಗುರುರಾಜ್, ನಾಗೇಶ್ ರಾಯಣೋರ, ಪ್ರದೀಪ್ ಕೋಟೆ, ಪ್ರಕಾಶ್ ಬಗದಲಕರ್, ಪಿಂಟೂ ಸಿರ್ಸಿ, ವಿಜಯ್ ಕುಮಾರ್, ಸೈಮನ್ ಮೇತ್ರೆ, ನೀಲೇಶ್ ರಾಥೋಡ್, ಶಿವು ಮಡಿವಾಳ, ಯೋಹಾನ್ ಮೀಸೆ, ಆಗಸ್ಟಿನ್ ಮೇತ್ರೆ, ಚಂದ್ರಕಾಂತ್ ಪೋಳ, ಮೋಜೆಸ ಅಣದುರೆ, ಜಾಫರ್ ಮಿಯ್ಯ, ಅಂಬರೀಶ್ ಜುಲ್ಫಿನೋರ್, ಪ್ರಸಾದ್ ಘೋಡಂಪಳ್ಳಿಕರ್, ಶಿವು ಮೇತ್ರೆ ಉಪಸ್ಥಿತರಿದ್ದರು.