ಬಳ್ಳಾರಿ: ಕರ್ನಾಟಕವು ರಂಗ ಕಲೆಯ ಶ್ರೀಮಂತ ನೆಲೆಯಾಗಿದ್ದು, ಇದಕ್ಕೆ ಪ್ರಾಚೀನ ಐತಿಹ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ತಿಳಿಸಿದರು.
ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದರು.
ಕಾರ್ಯಕ್ರಮದಲ್ಲಿ ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಡೊಳ್ಳು ಕುಣಿತ, ಬೇಡರ ಕುಣಿತ, ಕರಗ, ಕೋಲಾಟ, ಭರತನಾಟ್ಯ ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯ, ನಂದಿಧ್ವಜ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಮನಸೊರೆಗೊಂಡವು.ನಂತರದಲ್ಲಿ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಸಾರಥ್ಯದಲ್ಲಿ ಶ್ರೀಕೃಷ್ಣ ಸಂಧಾನ ನಾಟಕವು ಸಭಿಕರನ್ನು ಮನರಂಜಿಸುವುದರ ಜತೆಗೆ ಶಿಕ್ಷಣ, ಆರೋಗ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು ಹಾಗೂ ರಂಗಾಸಕ್ತರನ್ನು ನಗೆಗಡಲಿನಲ್ಲಿ ತೇಲಾಡಿಸಿತು.
ಕಾಲೇಜಿನ ಪ್ರಾಂಶುಪಾಲ ಟಿ. ವೀರಭದ್ರಪ್ಪ, ಹಿರಿಯ ಪ್ರಾಧ್ಯಾಪಕ ಕೃಷ್ಣಪ್ಪ, ಚಂದ್ರಕಾಂತ, ಶಾಂತಮೂರ್ತಿ, ರಂಗಕರ್ಮಿ ಬೀರಳ್ಳಿ ರಾಮಿರೆಡ್ಡಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.