ಇಂದಿನ ಏಕಾಗ್ರತೆಗೆ ಮೊಬೈಲ್‌ ಸವಾಲಾಗಿದೆ

KannadaprabhaNewsNetwork |  
Published : Feb 02, 2024, 01:03 AM IST
5 | Kannada Prabha

ಸಾರಾಂಶ

ಓದುವ ವೇಳೆ ಮನರಂಜನೆ ಪಡುವುದಕ್ಕಿಂತ, ಪರಿಶ್ರಮದಿಂದ ಓದಿ ಸಫಲರಾಗಿ ಮುಂದೆ ಜೀವನ ಪರ್ಯಂತ ಮನರಂಜನೆ ಪಡಬಹುದು. ಶಿಬಿರದಲ್ಲಿ ಗ್ರಾಮೀಣ ಪ್ರದೇಶದವರು, ಮಹಿಳೆಯರು ಹೆಚ್ಚಿರುವುದು ಸಂತೋಷದಾಯಕ

-ಹುಣಸೂರು ಎಸಿ ಮಹಮ್ಮದ್‌ ಹ್ಯಾರಿಸ್‌ ಸುಮೈರ್ ಅಭಿಮತ---

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾಜಿಕ ಜಾಲತಾಣಗಳನ್ನು ಜಾಗರೂಕತೆಯಿಂದ ಬಳಸಬೇಕು, ಏಕಾಗ್ರತೆ ಕಳೆದುಕೊಳ್ಳಬಾರದು ಎಂದು ಐಎಎಸ್‌ ಅಧಿಕಾರಿ ಹುಣಸೂರು ಎಸಿ ಮಹಮ್ಮದ್‌ ಹ್ಯಾರಿಸ್‌ ಸುಮೈರ್‌ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಐಎಎಸ್‌, ಕೆಎಎಸ್‌ ಪರೀಕ್ಷಾ ಸಿದ್ಧತೆ ಕುರಿತು ಮುಖ್ಯ ಭಾಷಣ ಮಾಡಿದರು.

ಐಎಎಸ್, ಐಪಿಎಸ್, ಐಎಫ್ಎಸ್ ಎಲ್ಲಾ ಹುದ್ದೆಗಳ ಮೂಲ ಉದ್ದೇಶ ಸೇವೆಯೇ. ಬೀದರಿನ ಬಡ ಕುಟುಂಬದವನಾದ ನಮ್ಮ ಮನೆ ಸಮೀಪ ಪೊಲೀಸ್‌ ಠಾಣೆ ಇತ್ತು. ಅಲ್ಲಿನ ಅಧಿಕಾರಿಗಳನ್ನು ದಿನನಿತ್ಯ ನೋಡುತ್ತಿದ್ದ ನನಗೆ ನಾನೇಕೆ ಹಾಗಾಗಬಾರದು ಎನಿಸಿತು, ಅಂದಿನಿಂದ ಅದಕ್ಕೆ ಏನು ಮಾಡಬೇಕೆಂದು ಹುಡುಕಿ ನಿರಂತರವಾಗಿ ಓದಿದೆ. ಚಿಕ್ಕ ವಯಸ್ಸಿನಲ್ಲಿಯೇ ಐಎಎಸ್‌ಗೆ ಸೇರ್ಪಡೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗೆ ಜೀವನದಲ್ಲಿ ಛಲ ರೂಢಿಸಿಕೊಳ್ಳಬೇಕು ಎಂದರು.

ಓದುವ ವೇಳೆ ಮನರಂಜನೆ ಪಡುವುದಕ್ಕಿಂತ, ಪರಿಶ್ರಮದಿಂದ ಓದಿ ಸಫಲರಾಗಿ ಮುಂದೆ ಜೀವನ ಪರ್ಯಂತ ಮನರಂಜನೆ ಪಡಬಹುದು. ಶಿಬಿರದಲ್ಲಿ ಗ್ರಾಮೀಣ ಪ್ರದೇಶದವರು, ಮಹಿಳೆಯರು ಹೆಚ್ಚಿರುವುದು ಸಂತೋಷದಾಯಕ ಎಂದರು.

ಶಿಸ್ತು ಸಾಧನೆಗೆ ಬಹುಮುಖ್ಯ, ಯಾವ ಹಂತದ ಪರೀಕ್ಷೆಯಾದರು ಓದಿನಲ್ಲಿ ತಲ್ಲೀನತೆ ಇರಬೇಕು ಎಂದರು.

ಶ್ರೀ ಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್‌ಕುಮಾರ್‌ಮುಕ್ತ ಭಂಡಾರ ಅಧ್ಯಯನ ಪುಸ್ತಕ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಬಿರಾರ್ಥಿಗಳು ಸಫಲರಾಗಬೇಕಾದರೆ ಶ್ರಮವೊಂದೇ ಅದಕ್ಕಿರುವ ದಾರಿ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿಗಳೂ ಇತರರಿಗಿಂತ ಭಿನ್ನವಾಗಿ ನಾವು ಹೇಗೆ ಮುಂದೆ ಬರಬೇಕು, ಹೇಗೆ ಸಫಲರಾಗಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಜ್ಞಾನ, ಕೌಶಲ್ಯ, ನಡತೆಯನ್ನು ಪರಿಪಕ್ವತೆ ಮಾಡಿಕೊಳ್ಳಬೇಕು. ಕಷ್ಟಪಟ್ಟು ನಿರಂತರವಾಗಿ ಓದುವುದರಿಂದ ಉನ್ನತಮಟ್ಟದ ಹಾದಿ ಸುಲಭವಾಗುತ್ತದೆ ಎಂದು ಅವರು ಹೇಳಿದರು.

ನಾನು ವಿದ್ಯಾರ್ಥಿದಿಸೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದವನು. ಆದರೆ ನಂತರದಲ್ಲಿ ಸಾಮಾನ್ಯರೇ ಹೆಚ್ಚು ಸಾಧನೆ ಮಾಡಿರುವುದನ್ನು ಕಂಡು ಓದಿನಲ್ಲಿ ನಿರತನಾದೆ. ಇಂದು ಯಶಸ್ಸಾಗಿ ನಿಮ್ಮೆಲ್ಲರಿಗೂ ಸಲಹೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಿ ಸತತ ಪ್ರಯತ್ನಪಡುವುದೇ ಕಾಯಕವೇ ಕೈಲಾಸ ಎಂದರು.

ಇಲ್ಲಿ ಪಡೆದ ಪರಿಣತಿಯನ್ನು ಜೀವನದಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ಆಗ ನಿಮ್ಮ ಶ್ರಮ ಸಾರ್ಥಕವಾಗಲಿದೆ ಎಂದರು.

ಕುಲಸಚಿವ ಪ್ರೊ.ಕೆ.ಎಲ್‌.ಎನ್‌. ಮೂರ್ತಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಅಧ್ಯಯನ ಡೀನ್‌ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಎಚ್. ಬೀರಪ್ಪ, ಸಿದ್ದೇಶ್‌ ಬನ್ನೂರ್‌, ಗಣೇಶ್‌ ಕೊಪ್ಪಲ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ