ಕನ್ನಡಪ್ರಭ ವಾರ್ತೆ ಮೈಸೂರುಶಿಕ್ಷಣದ ಕಲಿಕೆ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿಸಾಧಿಸಬಹುದು. ವಿದ್ಯಾರ್ಥಿಗಳು ವೈಫಲ್ಯಕ್ಕೆ ಹೆದರದೆ ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷೆ ಕಾಂತಾ ನಾಯಕ್ ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 45 ದಿನಗಳ ಕಾಲ ಆಯೋಜಿಸಿದ್ದ ಕೆ- ಸೆಟ್ಮತ್ತು ಯುಜಿಸಿ ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ,. ಕೌಶಲ್ಯ ಮಹತ್ವವಾದುದ್ದು, ಅದು ಯಾವುದಾದರೂ ಸರಿಯೇ, ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಅಗತ್ಯ ಕೌಶಲ್ಯಗಳನ್ನು ಪಡೆದು ಗುರಿಮುಟ್ಟಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲು ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಚರ್ಚೆಗಳಾಗಿ ನೂತನ ಯೋಜನೆಗಳು ಅನುಷ್ಠಾನಗೊಂಡಿವೆ. ಈ ಮೂಲಕ ಕ್ಯಾಂಪಸ್ ನೇರ ನೇಮಕಾ ತಿಗಳಲ್ಲಿ ಕೌಶಲ್ಯವಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿವೆ ಎಂದು ಅವರು ಹೇಳಿದರು.ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಕೌಶಲ್ಯ ಕೂಡ ವೃತ್ತಿಯಾಧಾರಿತ ಬದುಕು ನಡೆಸಲು ಮನುಷ್ಯನಿಗೆ ಸಹಾಯಕವಾಗುತ್ತಿವೆ. ವಿದೇಶಗಳಲ್ಲಿ ಇರುವ ಕೌಶಲ್ಯ ನಮ್ಮಲ್ಲಿ ಇಲ್ಲ. ಇದನ್ನು ನಾವು ಪ್ರಶ್ನಿಸಿಕೊಂಡು, ಓದಿ ಉದ್ಯೋಗ ಪಡೆಯುವುದೇ ಮುಖ್ಯವಲ್ಲ. ಇದರ ಜೊತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೌಶಲ್ಯ ಒಲಿಂಪಿಕ್ಸ್ನಲ್ಲಿ ನೀವೆಲ್ಲಾ ಭಾಗವಹಿಸಿ ಇಲ್ಲಿ ಎಲ್ಲಾ ತರಹದ ವೃತ್ತಿಪರ ಕೌಶಲ್ಯ ಪ್ರದರ್ಶಿಸಲು ಅವಕಾಶ ಇರುತ್ತದೆ. ಇದಕ್ಕೆ ಸರ್ಕಾರ ಶಿಷ್ಯವೇತನವನ್ನು ಕೂಡ ನೀಡುತ್ತಿದೆ ಎಂದು ಅವರು ತಿಳಿಸಿದರು.ಶಿಕ್ಷಕ ವೃತ್ತಿ ಆರಿಸಿಕೊಂಡು ಇಲ್ಲಿಗೆ ಬಂದಿದ್ದರು ನೀವುಗಳು ಎಐ (ಕೃತಕಬುದ್ದಿಮತ್ತೆ)ನ ಚಾಟ್ ಜಿಪಿಟಿ, ಗ್ರೊಕ್, ಜೆಮಿನಿ ಅಂತಹವುಗಳನ್ನು ಬಳಸಿಕೊಂಡು ಕಲಿಕೆ ಗುಣಮಟ್ಟ ಹೆಚ್ಚಿಕೊಂಡು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಹೀಗಾಗಿ ಕಲಿಕೆ ಒಟ್ಟಿಗೆ ಕೌಶಲ್ಯ ಸಹ ನಿಮ್ಮಲ್ಲಿ ಇರಬೇಕು ಎಂದು ಅವರು ಸಲಹೆ ನೀಡಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಇಂದಿನ ಕಾಲ ಘಟ್ಟದಲ್ಲಿ ತಂತ್ರಜ್ಞಾನ ಜೀವನ ಅವಿಭಾಜ್ಯ ಅಂಗವಾಗಿದೆ. ಇಂದಿನ ಅಧುನಿಕ ಯುಗಕ್ಕೆ ತಂತ್ರಜ್ಞಾನ ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕೆಹೊರತು ಅದನ್ನು ವಿರೋಧಿಸಬಾರದು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವವರಲ್ಲಿ ಯುನಿಕ್ ನೆಸ್ ಇರಬೇಕು. ಇದರ ಜೊತೆಗೆ ತಂತ್ರಜ್ಞಾನ ಅಳವಡಿಸಿಕೊಂಡರೆ ನಾವು ಬೇಗ ಗುರಿಮುಟ್ಟುತ್ತೇವೆ. ಸ್ಮರ್ಧಾತ್ಮಕ ಯುಗದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸುವವರು ತುಂಬಾ ಕಠಿಣವಾದ ಪ್ರಶ್ನೆಗಳನ್ನೆ ಸಿದ್ಧಪಡಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸುವ ಹಾಗೆ ಸಿದ್ಧವಾಗಿರಬೇಕು ಎಂದು ಅವರು ಹೇಳಿದರು.ಬೆಂಗಳೂರು ನಗರ ವಿವಿ ವಿಶ್ರಾಂತ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಕೌಶಲ್ಯವಿಲ್ಲದಿದ್ದರೆ ಯಾವುದೇ ರೀತಿ ಸಬಲೀಕರಣ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಶಿಕ್ಷಣದಲ್ಲಿ ಕೌಶಲ್ಯವು ಅತ್ಯಂತ ಅವಶ್ಯಕವಾದದ್ದು. ಕೌಶಲ್ಯ ಕೇಂದ್ರವು ಗ್ರಾಮೀಣ ಭಾಗದಿಂದ ಬಂದ ಯುವಜನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವವರಿಗೆ ಒಂದು ರೀತಿಯ ಆಶಾಕಿರಣ ಹಾಗೂ ಬೆನ್ನಲುಬಾಗಿ ನಿಂತಿದೆ. ಶಿಕ್ಷಣದಿಂದ ಮಾತ್ರ ಎಲ್ಲೆಮೀರಲು ಸಾಧ್ಯ ಎಂದು ಅವರು ಹೇಳಿದರು.ಮೈಸೂರು ಒಂದು ಶೈಕ್ಷಣಿಕ ರಾಜಧಾನಿ. ಶೈಕ್ಷಣಿಕವಾಗಿ ದೊಡ್ಡ ಇತಿಹಾಸ ಪರಂಪರೆ ಇದೆ. ಅದನ್ನು ಸಂರಕ್ಷಿಸಿಕೊಂಡು ಯುವ ಜನಾಂಗಕ್ಕೆ ಪಸರಿಸುವಲ್ಲಿ, ಪೂರೈಸುವಲ್ಲಿ ದೊಡ್ಡ ಕೆಲಸಗಳಾಗುತ್ತಿವೆ. ಮೈಸೂರಿನ ಮಾಧ್ಯಮ ಬೇರೆಲ್ಲ ಕ್ಷೇತ್ರಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.ದೇಶದಲ್ಲಿ ಈ ರೀತಿಯ ಉಚಿತವಾಗಿ ಅವಕಾಶ ಒದಗಿಸುವ ವಿಶ್ವವಿದ್ಯಾನಿಲಯಗಳು ಅತ್ಯಂತ ವಿರಳ. ಅವಕಾಶವಂಚಿತರಿಗೆ, ಉನ್ನತ ಶಿಕ್ಷಣ ವಿಸ್ತರಿಸುವ, ಒದಗಿಸುವ ಕೆಲಸ ಆಗುತ್ತಿದೆ. ಸಮಾಜ, ಸಮುದಾಯ, ಕೈಗಾರಿಗಳ, ಸಂಸ್ಥೆಗಳ ನಡುವೆ ನಂಟು ಬೆಳೆಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳ ಕಲಿಕೆಯು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗಬೇಕಿದೆ. ಇಂದು ತಂತ್ರಜ್ಞಾನದಲ್ಲಿ ಬದುಕುತಿದ್ದು, ಕೃತಕ ಬುದ್ಧಿಮತ್ತೆಯು ನಮ್ಮೆಲ್ಲರ ಬದುಕನ್ನು, ಕ್ಷೇತ್ರವನ್ನು ಆವರಿಸಿದೆ. ಎಲ್ಲಾ ವಿಚಾರ, ವಿಷಯಗಳು ಅಂಗೈನಲ್ಲೆ ಸಿಗುವ ಅವಕಾಶ ಒದಗಿಸಿದೆ. ಈ ಯುಗದಲ್ಲಿ ಭೋದನೆ, ಸಂಶೋಧನೆ, ಕಲಿಕೆ ಎಲ್ಲವೂ ದೊಡ್ಡ ಸವಾಲಾಗಿದೆ ಎಂದರು.ಆದ್ದರಿಂದ ತಂತ್ರಜ್ಞಾನವನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಮುಂದುವರೆಯಬೇಕು. ಇದೆಲ್ಲದರ ನಡುವೆ ಬದುಕಿನಲ್ಲಿ ಮಾನವೀಯತೆ, ನೈತಿಕ ಮೌಲ್ಯ, ಸಮಾಜದ ಸಾಮರಸ್ಯ, ಜವಬ್ದಾರಿ ಸ್ಥಾಪಿಸುವಲ್ಲಿ, ಕೂಡಿಸುವಲ್ಲಿ ಶಿಕ್ಷಕರ ಪಾತ್ರ, ಶಿಕ್ಷಣದ ಪಾತ್ರ ಹೆಚ್ಚಿದೆ ಎಂದು ಅವರು ಹೇಳಿದರು.ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿ ಜೊತೆಗೆ ಸಮಯ ಪರಿಪಾಲನೆ ಮಾಡುವ ಕೌಶಲ್ಯ ಕೂಡ ಇರಬೇಕು. ನಿಮ್ಮ ಶ್ರಮದ ಮೇಲೆ ನಿಮಗೆ ನಂಬಿಕೆಯಿರಲಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ಪ್ರೊ. ರಾಮನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್.ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಬಿ. ಗಣೇಶ್ ಕೆ.ಜಿ. ಕೊಪ್ಪಲ್ ಮೊದಲಾದವರು ಇದ್ದರು.