ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಂಡ್ಯದಲ್ಲೇ ಸಭೆ ನಡೆಸಲಿ: ಪ್ರೊ.ಜೆಪಿ

KannadaprabhaNewsNetwork |  
Published : May 13, 2025, 11:45 PM IST
೧೩ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಪರಿಚಾರಕ ಸಂಸ್ಥೆಯಷ್ಟೇ. ಅದು ಜಿಲ್ಲಾಡಳಿತಕ್ಕಿಂತ ದೊಡ್ಡದೇನಲ್ಲ. ಸ್ಮರಣಸಂಚಿಕೆ ಕುರಿತ ಸಮಾಲೋಚನಾ ಸಭೆಗೆ ಬರುವುದಕ್ಕೆ ಹೆದರಿಕೆ ಏಕೆ. ಮಂಡ್ಯದವರೇನು ಕೊಲೆಗಡುಕರಾ. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು ಹಾಗೂ ಇತರೆ ಯಾವುದೇ ಅಧಿಕಾರಿಗಳು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು ಕರೆದಿರುವ ಸಭೆಗೆ ಹೋಗಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆಗೆ ಸಂಬಂಧಿಸಿದ ಸಭೆ ಮಂಡ್ಯದಲ್ಲೇ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಇಲ್ಲಿಗೇ ಬರಬೇಕು. ಬೆಂಗಳೂರಿನಲ್ಲಿ ಅಧ್ಯಕ್ಷರು ಗುರುವಾರ (ಮೇ ೧೫) ಕರೆದಿರುವ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೋದರೆ ಅದು ಜಿಲ್ಲೆಗೇ ಅವಮಾನ ಮಾಡಿದಂತೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಪರಿಚಾರಕ ಸಂಸ್ಥೆಯಷ್ಟೇ. ಅದು ಜಿಲ್ಲಾಡಳಿತಕ್ಕಿಂತ ದೊಡ್ಡದೇನಲ್ಲ. ಸ್ಮರಣಸಂಚಿಕೆ ಕುರಿತ ಸಮಾಲೋಚನಾ ಸಭೆಗೆ ಬರುವುದಕ್ಕೆ ಹೆದರಿಕೆ ಏಕೆ. ಮಂಡ್ಯದವರೇನು ಕೊಲೆಗಡುಕರಾ. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು ಹಾಗೂ ಇತರೆ ಯಾವುದೇ ಅಧಿಕಾರಿಗಳು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು ಕರೆದಿರುವ ಸಭೆಗೆ ಹೋಗದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಧಿಕಾರಿಗಳು ಕರೆದಿದ್ದ ಸ್ಮರಣಸಂಚಿಕೆ ಸಮಾಲೋಚನಾ ಸಭೆಗೆ ಜೋಶಿ ಬರಬೇಕಿತ್ತು. ಬರದೇ ರಾಜಧಾನಿಯಲ್ಲೇ ಉಳಿದುಕೊಂಡಿದ್ದೇಕೆ. ಸಚಿವರು, ಜಿಲ್ಲಾಡಳಿತಕ್ಕಿಂತ ಜೋಶಿ ದೊಡ್ಡವರಾ?. ಸಚಿವ ಎನ್.ಚಲುವರಾಯಸ್ವಾಮಿ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ. ಪರಿಷತ್ತಿನಿಂದ ಬರಬೇಕಾದ ಎರಡು ಫೋಟೋಗೆ ಕಾದು ಕೂರುವ ಅಗತ್ಯವಿಲ್ಲ. ಜೋಶಿ ಬರದಿದ್ದರೂ ಸ್ಮರಣಸಂಚಿಕೆಯನ್ನು ಇನ್ನೊಂದು ವಾರದೊಳಗೆ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯಕಾರಿ ಸಮಿತಿ, ಜೋಶಿ ಅವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಅವರ ನಡವಳಿಕೆಗಳು, ಧೋರಣೆಗಳ ಬಗ್ಗೆಯಷ್ಟೇ ನಮ್ಮ ಹೋರಾಟವಿದೆ. ಪ್ರಜಾಪ್ರಭುತ್ವದ ಹಾದಿ ಬಿಟ್ಟು ಅಧ್ಯಕ್ಷರು ನಡೆಯುತ್ತಿರುವುದಕ್ಕೆ ಸೀಮಿತವಾಗಿ ಚಳವಳಿ ನಡೆಸಲಾಗುತ್ತಿದೆ. ೧೧೦ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ಹಾದಿಯಲ್ಲಿ ಯಾವೊಬ್ಬ ಅಧ್ಯಕ್ಷರೂ ಇಂತಹ ಧೋರಣೆಯನ್ನು ತಳೆದಿರಲಿಲ್ಲ ಎಂದರು.

ಕನ್ನಡದ ಬೆಳವಣಿಗೆ ಬಗ್ಗೆ, ಭಾಷೆಯ ಶ್ರೇಷ್ಠತೆಯನ್ನು ಕಾಪಾಡುವ, ಕನ್ನಡಿಗರ ಮೇಲಿನ ದೌರ್ಜನ್ಯದ ವಿರುದ್ಧ ದನಿ ಎತ್ತುವ, ಗಡಿ ಸಮಸ್ಯೆ, ಕನ್ನಡಶಾಲೆ ಮುಚ್ಚುತ್ತಿರುವ ಬಗ್ಗೆ ಜೋಶಿ ವಹಿಸಿರುವ ಪಾತ್ರವಾದರೂ ಏನು ಎಂದು ಪ್ರಶ್ನಿಸಿದ ಅವರು, ದತ್ತಿ, ಸಮ್ಮೇಳನ ಹೊರತುಪಡಿಸಿದರೆ ರಾಜ್ಯಾಧ್ಯಕ್ಷ ಜೋಶಿಗೆ ಭಾಷೆಯನ್ನು ಬೆಳೆಸುವ ಬಗ್ಗೆ ಚಿಂತೆಯೇ ಇಲ್ಲ ಎಂದು ದೂಷಿಸಿದರು.ರಾಜ್ಯಾದ್ಯಂತ ವಿಸ್ತರಣೆ:

ಜೋಶಿ ವಿರುದ್ಧ ಮಂಡ್ಯದಿಂದ ಆರಂಭಗೊಂಡಿರುವ ಹೋರಾಟ ರಾಜ್ಯಾದ್ಯಂತ ನಿಧಾನವಾಗಿ ವಿಸ್ತರಣೆಗೊಳ್ಳುತ್ತಿದೆ. ಎಲ್ಲಾ ಕಡೆಯಿಂದಲೂ ಜೋಶಿ ವಿರುದ್ಧ ಕೂಗು ಕೇಳಿಬರುತ್ತಿದೆ. ಮೇ ೧೭ರಂದು ನಡೆಯಲಿರುವ ಜನಚಳವಳಿ ಸಮಾವೇಶದಲ್ಲಿ ದೇವನೂರು ಮಹಾದೇವ, ಹಿ.ಶಿ.ರಾಮಚಂದ್ರೇಗೌಡ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಎಲ್ಲಾ ಸಾಹಿತಿಗಳು ಜೋಶಿ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ಎಂ.ವಿ.ಧರಣೇಂದ್ರಯ್ಯ, ಮೀರಾ ಶಿವಲಿಂಗಯ್ಯ, ಸುನಂದಾ ಜಯರಾಂ, ಎಚ್.ವಿ. ಜಯರಾಂ, ಡಿ.ಪಿ.ಸ್ವಾಮಿ, ಜಯರಾಂ ಇದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸದಸ್ಯತ್ವವನ್ನು ಯಾರನ್ನೂ ಕೇಳದೆ, ಸಕಾರಣವಿಲ್ಲದೆ ರದ್ದುಪಡಿಸುತ್ತಿದ್ದಾರೆ. ಸಾಹಿತ್ಯ ಪರಿಷತ್ತಿನ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಒಬ್ಬ ಅಧ್ಯಕ್ಷರಾಗಿ ಪರಿಷತ್ತಿನ ಸದಸ್ಯರೊಂದಿಗೆ ವಿಶ್ವಾಸದಿಂದ ಇರಬೇಕೇ ವಿನಃ ದ್ವೇಷ ಸಾಧಿಸಬಾರದು. ತಪ್ಪು ಮಾಡಿದ್ದರೆ ಸರಿಪಡಿಸುವ ಕೆಲಸ ಮಾಡಬೇಕೇ ವಿನಃ ದ್ವೇಷದಿಂದ ಅವರ ಸದಸ್ಯತ್ವವನ್ನೇ ರದ್ದುಗೊಳಿಸುವ ಕ್ರಮ ಸರಿಯಲ್ಲ.

- ಮೀರಾ ಶಿವಲಿಂಗಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪಸಮ್ಮೇಳನದ ಆರಂಭದಿಂದ ಹಿಡಿದು ಸಮ್ಮೇಳನ ಮುಗಿದ ನಂತರವೂ ಕಸಾಪ ರಾಜ್ಯಾಧ್ಯಕ್ಷರ ನಡವಳಿಕೆ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಹಾಗಾದರೆ ಜೋಶಿ ಅವರಿಗೆ ಯಾರ ಅಂಕುಶವೂ ಇಲ್ಲವೇ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಷತ್ತಿನ ವಿವಾದಕ್ಕೆಲ್ಲಾ ತೆರೆ ಎಳೆಯಬೇಕು. ಗೊಂದಲಗಳನ್ನು ನಿವಾರಿಸಿ ಪರಿಷತ್ತು ಕನ್ನಡಪರವಾಗಿ ಕೆಲಸ ಮಾಡುವಂತೆ ಮಾಡಬೇಕು.

- ಸುನಂದಾ ಜಯರಾಂ, ರೈತ ನಾಯಕಿರಾಜ್ಯಾಧ್ಯಕ್ಷರಾದವರು ಕೇಂದ್ರ ಕಾರ್ಯಕಾರಿ ಸಮಿತಿಗೆ ಇದುವರೆಗೆ ಜಿಲ್ಲಾಧ್ಯಕ್ಷರ ಪೈಕಿ ಐದರಿಂದ ಆರು ಜನರನ್ನಷ್ಟೇ ನೇಮಕ ಮಾಡಿಕೊಳ್ಳುತ್ತಿದ್ದರು. ಹಾಲಿ ಅಧ್ಯಕ್ಷ ಜೋಶಿ ೩೫ ರಿಂದ ೩೬ ಜನರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಿಕೊಂಡಿದ್ದು, ಯಾರೂ ಇವರ ವಿರುದ್ಧ ದನಿ ಎತ್ತಬಾರದೆಂಬ ಉದ್ದೇಶದಿಂದ ಅಸಾಂಪ್ರದಾಯಿಕ ನಡೆ ಅನುಸರಿಸುತ್ತಿದ್ದಾರೆ. ಒಟ್ಟಿನಲ್ಲಿ ಜೋಶಿ ಅವರನ್ನು ಯಾರೂ ಪ್ರಶ್ನಿಸುವಂತಿಲ್ಲವೇ?.

- ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ