ಕಟೀಲು ಜಾತ್ರೋತ್ಸವ: ಹಗಲು ರಥೋತ್ಸವ ಸಂಪನ್ನ

KannadaprabhaNewsNetwork | Published : Apr 20, 2025 1:53 AM

ಸಾರಾಂಶ

ಬೆಳಗ್ಗೆ ಪ್ರಾರ್ಥನೆಯಾಗಿ ದೇವರು ಹೊರಟು, ರಥ ಬಲಿಯಾಗಿ ರಥರೋಹಣ ನಡೆದು, ರಥ ಹೂವಿನ ಪೂಜೆಯಾಗಿ ರಥೋತ್ಸವ ನೆರವೇರಿತು. ಬಳಿಕ ಮೂರು ಕಡೆಯಲ್ಲಿ ಕಟ್ಟೆಪೂಜೆ, ದರ್ಶನಬಲಿ (ಓಡಬಲಿ), ಭೋಜನ ಶಾಲೆಗೆ ಪ್ರಸಾದ ಹಾಕಿ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಬಲಿ ಹೊರಟು ದೊಡ್ಡ ಅಜಕಾಯಿ, ರಾತ್ರಿ ಚಿನ್ನದ ರಥ ಉತ್ಸವ, ಚಿನ್ನದ ಪಲ್ಲಕಿ ಉತ್ಸವ, ವಸಂತಮಂಟಪ ಪೂಜೆ, ಅಷ್ಟಾವಧಾನ, ರಾತ್ರಿ ಪೂಜೆ, ಅಭಿಷೇಕ, ಶಯನ ಅಲಂಕಾರ, ಮಧ್ಯರಾತ್ರಿ ಶ್ರೀಭೂತ ಬಲಿ, ಶಯನ, ಕವಾಟ ಬಂಧನ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ 7ನೇ ದಿನವಾದ ಶನಿವಾರ ಹಗಲು ರಥೋತ್ಸವ ನಡೆಯಿತು.

ಬೆಳಗ್ಗೆ ಪ್ರಾರ್ಥನೆಯಾಗಿ ದೇವರು ಹೊರಟು, ರಥ ಬಲಿಯಾಗಿ ರಥರೋಹಣ ನಡೆದು, ರಥ ಹೂವಿನ ಪೂಜೆಯಾಗಿ ರಥೋತ್ಸವ ನೆರವೇರಿತು. ಬಳಿಕ ಮೂರು ಕಡೆಯಲ್ಲಿ ಕಟ್ಟೆಪೂಜೆ, ದರ್ಶನಬಲಿ (ಓಡಬಲಿ), ಭೋಜನ ಶಾಲೆಗೆ ಪ್ರಸಾದ ಹಾಕಿ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಬಲಿ ಹೊರಟು ದೊಡ್ಡ ಅಜಕಾಯಿ, ರಾತ್ರಿ ಚಿನ್ನದ ರಥ ಉತ್ಸವ, ಚಿನ್ನದ ಪಲ್ಲಕಿ ಉತ್ಸವ, ವಸಂತಮಂಟಪ ಪೂಜೆ, ಅಷ್ಟಾವಧಾನ, ರಾತ್ರಿ ಪೂಜೆ, ಅಭಿಷೇಕ, ಶಯನ ಅಲಂಕಾರ, ಮಧ್ಯರಾತ್ರಿ ಶ್ರೀಭೂತ ಬಲಿ, ಶಯನ, ಕವಾಟ ಬಂಧನ ನೆರವೇರಿತು.

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸದನದಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ಭಜನೆ, ಸಂಜೆ ದುರ್ಗಾ ಮಕ್ಕಳ ಮೇಳದಿಂದ ‘ಶ್ರೀಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಹಗಲು ರಥೋತ್ಸವದ ಪ್ರಯುಕ್ತ ಮಂಗಳೂರಿನಿಂದ ಬಜಪೆ, ಕಟೀಲು, ಕಿನ್ನಿಗೋಳಿಗೆ ಸಂಚರಿಸುವ ಗೋಲ್ಡನ್‌ ಟ್ರಾವೆಲ್ಸ್‌ನ ಎಲ್ಲ ಸರ್ವಿಸ್‌ ಬಸ್‌ಗಳು ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೇವೆ ನೀಡಿದೆ.

ಏ.20ರಂದು ಬ್ರಹ್ಮರಥೋತ್ಸವ:

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏ.20ರಂದು ರಾತ್ರಿ ರಥೋತ್ಸವ ನಡೆಯಲಿದೆ. ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ, ರಾತ್ರಿ ಅವಭೃತೋತ್ಸವ (ಆರಾಟ), ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ಸೂಟೆದಾರ, ಶಿಬರೂರು ಶ್ರೀ ಕೊಡಮಣಿತ್ತಾಯ ದೈವದ ಭೇಟಿ, ಧ್ವಜಾವರೋಹಣ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸದನದಲ್ಲಿ ರಾತ್ರಿ 8ರಿಂದ ಸನಾತನ ನಾಟ್ಯಾಲಯದಿಂದ ಭರತನಾಟ್ಯ, 10ರಿಂದ ಜಗದೀಶ್‌ ಪುತ್ತೂರು ಅವರಿಂದ ಭಕ್ತಿಗಾನಾರಾಧನೆ, ಶ್ರೀ ಕ್ಷೇತ್ರ ಕಟೀಲಿನ ಯಕ್ಷಗಾನದ ಎಲ್ಲ ಆರು ಮೇಳಗಳಿಂದ ಆರಾಟ ಪ್ರಯುಕ್ತ ಸೇವೆ ಆಟ ನಡೆಯಲಿದೆ.

Share this article