ಕೊಡಗು ಗಡಿ ದಾಟಿ ಹಾಸನದತ್ತ ಕಾವೇರಿ ನದಿ ಜಾಗೃತಿ ಯಾತ್ರೆ

KannadaprabhaNewsNetwork | Updated : Oct 23 2024, 12:44 AM IST

ಅಖಿಲ ಭಾರತ ಸಾಧುಸಂತರ ಸಂಘದ ಕಾವೇರಿ ನದಿ ಜಾಗೃತಿ ತಂಡ ಕಳೆದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯತ್ತ ಸಾಗಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಅಖಿಲ ಭಾರತ ಸಾಧುಸಂತರ ಸಂಘದ ಕಾವೇರಿ ನದಿ ಜಾಗೃತಿ ತಂಡ ಕಳೆದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯತ್ತ ಸಾಗಿತು.

ಕೂಡಿಗೆ ಸಮೀಪದ ಕಣಿವೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ ಎನ್ ಸುರೇಶ್ ಮಾತನಾಡಿ, ಕಾವೇರಿ ನದಿ ಸಂರಕ್ಷಣೆ ಬಗ್ಗೆ ಜನರಿಗೆ ನಿರಂತರವಾಗಿ ಅರಿವು ಜಾಗೃತಿ ಮೂಡಿಸುತ್ತಿರುವ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಚ್ಛ ಕಾವೇರಿಗಾಗಿ ಕೈಜೋಡಿಸುವುದಾಗಿ ದೇವಾಲಯ ಆಡಳಿತ ಮಂಡಳಿ ಪರವಾಗಿ ಭರವಸೆ ವ್ಯಕ್ತಪಡಿಸಿದರು.

ದೇವಾಲಯ ಬಳಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ನದಿ ತಟದಲ್ಲಿ ಪ್ರತಿ ಹುಣ್ಣಿಮೆಯ ಸಂದರ್ಭ ಆರತಿ ಕಾರ್ಯಕ್ರಮ ಹಮ್ಮಿ ಕೊಳ್ಳುವ ಮೂಲಕ ಜನರಿಗೆ ನದಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ಮೂಲಕ ಜನರಿಗೆ ನದಿ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ ಎನ್ ಚಂದ್ರಮೋಹನ್, ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಜಾಗೃತಿ ಕಾರ್ಯಕ್ರಮ ಆಯೋಜಕ ಆದಿತ್ಯಾನಂದ ಸ್ವಾಮೀಜಿ, ದೇವಾಲಯ ಸಮಿತಿ ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಕಾರ್ಯದರ್ಶಿ ಕೆ ಎಸ್ ಮಾಧವ, ನಿರ್ದೇಶಕರಾದ ನವೀನ್, ಮಧುಸೂದನ್, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಸುಕನ್ಯಾ ಸುರೇಶ್, ಸಾಧುಸಂತರ ಸಂಘದ ಸದಸ್ಯರು ಇದ್ದರು.

ನಂತರ ಸಾಧು ಸಂತರು ತಂಡದ ಸದಸ್ಯರು ಜಿಲ್ಲೆಯಿಂದ ಕೊಣನೂರು ಮಾರ್ಗವಾಗಿ ರಾಮನಾಥಪುರದತ್ತ ಸಾಗಿದರು.