ಮಕ್ಕಳು ತಂಬಾಕು ಸೇವಿಸದಂತೆ ಎಚ್ಚರ ವಹಿಸಿ

KannadaprabhaNewsNetwork | Published : Jun 1, 2024 12:47 AM

ಸಾರಾಂಶ

ಪ್ರಕೃತಿಯು ನೀಡುವಂತ ಉತ್ತಮವಾದ ನೀರು, ಗಾಳಿ, ಆಹಾರಗಳಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ನಾವು ಕೃತಕ ಆಹಾರ, ಗಾಳಿ, ನೀರು ಸೇವನೆಯಿಂದ ನಮ್ಮ ಆರೋಗ್ಯವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಕೋಲಾರಸುಸ್ಥಿರ ಸಮಾಜ ನಿರ್ಮಾಣಕ್ಕೆ ಸುಸ್ಥಿರ ಆರೋಗ್ಯವೂ ಮುಖ್ಯ. ಆರೋಗ್ಯವನ್ನು ಸದೃಢತೆಯಿಂದ ಕಾಪಾಡಿಕೊಳ್ಳಲು ನಮ್ಮನ್ನು ನಾವು ನಿಗ್ರಹಿಸಿ ಕೊಳ್ಳುವಂತಾಗಬೇಕು ಎಂದು ಜಿಲ್ಲಾ ಸತ್ರ ಸೆಷನ್ ನ್ಯಾಯಾಧೀಶರಾದ ಮಂಜುನಾಥ್ ಕರೆ ನೀಡಿದರು.ನಗರದ ಜಿಲ್ಲಾ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳ ಸಂರಕ್ಷಣೆ ಅಗತ್ಯ

ತಂಬಾಕು ಸೇವಿಸದಂತೆ ಮಕ್ಕಳನ್ನು ಸಂರಕ್ಷಿಸುವಂತಾಗಬೇಕು, ತಂಬಾಕು ಉತ್ಪನ್ನದಲ್ಲಿ ಮತ್ತು ಆಮದು, ರಪ್ತುಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ತಂಬಾಕು ಉತ್ಪನ್ನವನ್ನು ಕೃಷಿಯನ್ನಾಗಿ ಪರಿಗಣಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯವಿದೆ ಎಂಬುವುದನ್ನು ಅಲ್ಲಗೆಳೆಯಲಾಗದು ಎಂದು ಹೇಳಿದರು.ಪ್ರಕೃತಿಯು ನೀಡುವಂತ ಉತ್ತಮವಾದ ನೀರು, ಗಾಳಿ, ಆಹಾರಗಳಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ನಾವು ಇಂದು ಹಣವನ್ನು ನೀಡಿ ಕೃತಕ ಆಹಾರ, ಗಾಳಿ, ನೀರು ಸೇವನೆ ಮಾಡುತ್ತಿರುವುದರಿಂದ ನಮ್ಮ ಆರೋಗ್ಯವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.ಶಿಕ್ಷಣದ ಜತೆ ನೀತಿಪಾಠ

೧೫-೧೬ನೇ ವರ್ಷದ ಬಾಲಕರು ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಉಪನ್ಯಾಸಕರು ಹೆಚ್ಚಿನ ನಿಗಾವಹಿಸಿ ದುಶ್ಚಟಗಳಿಗೆ ಬಲಿಯಾಗದಂತೆ ಅವರಿಗೆ ಶಿಕ್ಷಣದ ಜೊತೆಗೆ ನೀತಿ ಪಾಠಗಳನ್ನು ಮಾಡುವಂತಾಗಬೇಕು, ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು. ಶಾಲಾ ಕಾಲೇಜುಗಳ ಬಳಿ ಇರುವಂತ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟ್ಕಾ, ಇತ್ಯಾದಿಗಳು ಸುಲಭವಾಗಿ ಸಿಗುತ್ತಿರುವುದರ ಬಗ್ಗೆ ಎಚ್ಚರವಹಿಸಿ ಕಾನೂನು ಉಲ್ಲಂಘನೆ ವಿರುದ್ದ ದೂರು ನೀಡಿ ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.ಪ್ರಮಾಣ ವಚನ ಬೋಧನೆ

ಜಿಲ್ಲಾ ಹಿರಿಯ ನ್ಯಾಯದೀಶರಾದ ಸುನೀಲ್ ಹೊಸಮನಿ ಪ್ರಮಾಣ ವಚನ ಬೋಧಿಸಿದರು. ಡಿಹೆಚ್‌ಓ ಡಾ.ಜಗದೀಶ್, ಡಾ.ಚಾರಣಿ, ಡಾ.ನಾರಾಯಣಸ್ವಾಮಿ, ಡಾ.ಚಂದ್ರ ಶೇಖರ್, ರೋಟರಿ ಮುನೇಗೌಡ ಇದ್ದರು. ನಗರದಲ್ಲಿ ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯ ನರ್ಸಿಂಗ್ ತರಬೇತಿ ವಿದ್ಯಾರ್ಥಿಗಳು, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಚನ್ನೇಗೌಡ ನರ್ಸ್ಸಿಂಗ್ ವಿದಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅರಿವು ಮೂಡಿಸಿದರು.

Share this article