ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್ಎಸ್) ಶುಕ್ರವಾರ ಸುರಕ್ಷತಾ ತಪಾಸಣೆ
ಕನ್ನಡಪ್ರಭ ವಾರ್ತೆ ಬೆಂಗಳೂರು ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್ಎಸ್) ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಿದ್ದು, ಮುಂದಿನ ವಾರ ಈ ಮಾರ್ಗದ ಕಾರ್ಯಾಚರಣೆಗೆ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. ನೇರಳೆ ಕಾರಿಡಾರ್ನ ವಿಸ್ತರಿತ 1.9 ಕಿಮೀ ಅಂತರದ ಈ ಮಾರ್ಗ ಇದಾಗಿದೆ. ಮುಂದಿನ ಮಂಗಳವಾರ ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ಸಿಎಂಆರ್ಎಸ್ ಈ ಮಾರ್ಗದ ಸುರಕ್ಷತಾ ಪ್ರಮಾಣಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಕೆಲ ನಿಬಂಧನೆಗಳೊಂದಿಗೆ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಬಹುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಇದಾದ ಬಳಿಕ ಮುಂದಿನ ವಾರವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮಾರ್ಗದ ಕಾರ್ಯಾಚರಣೆ ಉದ್ಘಾಟನೆಗೆ ದಿನ ನಿಗದಿಸುವಂತೆ ಕೋರಿ ಪತ್ರ ಬರೆಯಲಾಗುವುದು ಎಂದು ಮೆಟ್ರೋ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಸಿಎಂಆರ್ಎಸ್ ತಪಾಸಣೆ ಹಿನ್ನೆಲೆಯಲ್ಲಿ ಇಡೀದಿನ ಕೆಂಗೇರಿ ಮತ್ತು ಮೈಸೂರು ರಸ್ತೆ ನಿಲ್ದಾಣ ಮೆಟ್ರೋ ಮಾರ್ಗ ಬಂದ್ ಆಗಿತ್ತು. ಅಲ್ಲದೆ, ಸಿಗ್ನಲಿಂಗ್ ಕಾರಣಕ್ಕೆ ಕೆ.ಆರ್.ಪುರ- ಗರುಡಾಚಾರ್ಪಾಳ್ಯ ನಡುವಿನ ಮೆಟ್ರೋ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ವಿಸ್ತರಿತ ಮಾರ್ಗದ ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ (2 ಕಿ.ಮೀ.) ನಡುವೆ ಈಗಾಗಲೇ ತಪಾಸಣೆ ಪೂರ್ಣಗೊಂಡಿದ್ದು, ಇಲ್ಲಿ ರೈಲ್ವೆ ಸಂಚಾರಕ್ಕೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಇದೀಗ ಕೆಂಗೇರಿ- ಚಲ್ಲಘಟ್ಟ (1.9 ಕಿ.ಮೀ) ಮಾರ್ಗದ ತಪಾಸಣೆಯೂ ಮುಗಿದಿದ್ದು, ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ 43 ಕಿ.ಮೀ. ರೈಲ್ವೆ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. --- ಫೋಟೋ ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್ಎಸ್) ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.