ಹೊನ್ನಾವರ: ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 90ನೇ ವರ್ಷದ ಸಂಭ್ರಮ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -೧೫ ಕಾರ್ಯಕ್ರಮ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಿತು.
ಪ್ರದರ್ಶನಾಂಗಣ ಉದ್ಘಾಟಿಸಿದ ಬೆಂಗಳೂರು ಉತ್ತರ ವಿವಿ ಉಪಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ಯಕ್ಷಗಾನ ಪ್ರತಿಯೊಬ್ಬರ ನರನಾಡಿಗಳಲ್ಲಿದೆ. ಶಾಸ್ತ್ರೀಯ ಮಟ್ಟವನ್ನು ಬಿಡದೇ ಪರಂಪರೆಯ ಕಲೆಯಾಗಿ ಉಳಿಸಿದ್ದಾರೆ. ಸಂಪ್ರದಾಯವನ್ನು ಉಳಿಸುವುದು ದೊಡ್ಡ ಕೆಲಸ. ನಾಲ್ಕು ತಲೆಮಾರು ಮುಂದುವರೆಸುತ್ತಿರುವುದು ಗಮನಾರ್ಹ. ಶಂಭು ಹೆಗಡೆಯವರ ಕನಸು ನನಸಾಗುತ್ತದೆ. ಒಂಬತ್ತು ದಿನ ಈ ಕಾರ್ಯಕ್ರಮ ಆಯೋಜಿಸುವುದು ಸುಲಭವಲ್ಲ. ಯಕ್ಷಗಾನ ಶಾಲೆಯನ್ನು ಮುಂದುವರಿಸುವಂತಾಗಬೇಕು ಎಂದರು.
ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದಕ್ಕೆ ನೀಡಲಾಯಿತು. ಪರಿಷತ್ತು ಪರವಾಗಿ ಅದರ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಕೆರೆಮನೆ ಯಕ್ಷಗಾನ ಮಂಡಳಿ ಹಾಗೂ ಜಾನಪದ ಪರಿಷತ್ ಈ ಎರಡು ಸಂಸ್ಥೆಗೆ ವಿಶ್ವಮಾನ್ಯತೆ ಸಿಕ್ಕಿದೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಶಿವರಾಮ್ ಹೆಗಡೆ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಮಹತ್ವದ್ದು. ಇದಕ್ಕಾಗಿ ಕೃತಜ್ಞತೆ ಸಲ್ಲಿಸುವೆ ಎಂದರು.ಮುಖ್ಯ ಅಭ್ಯಾಗತ ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ.ಜಯರಾಜನ್ ಮಾತನಾಡಿ, ನಾಲ್ಕನೇ ಬಾರಿಗೆ ಈ ಕಾರ್ಯಕ್ರಮಕ್ಕೆ ಬಂದಿರುವೆ. ಇದು ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ. 90 ವರ್ಷ ಸಾಗಿ ಬಂದಿದೆ. ೨೦೦ ದೇಶಗಳಿಗೆ ಖ್ಯಾತಿ ಪಸರಿಸಿದೆ. ಯಕ್ಷಗಾನ ಎಂದರೇನು ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. ಇದು ದೊಡ್ಡ ಸಾಧನೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು. ಹಿರಿಯ ಪತ್ರಕರ್ತ ಜಿ.ಯು.ಭಟ್ ಆಶಯ ನುಡಿಗಳನ್ನಾಡಿದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಇಡಗುಂಜಿ ಯಕ್ಷಗಾನ ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ವಂದಿಸಿದರು. ಎಲ್.ಎಂ.ಹೆಗಡೆ, ಈಶ್ವರ ಹೆಗಡೆ ನಿರೂಪಿಸಿದರು.