ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಿಗೆ ಸಂಬಂಧಿಸಿದ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ನೇತೃತ್ವದಲ್ಲಿ ಬುಧವಾರ ಮೈಕ್ರೋ ಫೈನಾನ್ಸ್ ಮ್ಯಾನೇಜರ್ಗಳ ಜೊತೆ ಸಭೆ ನಡೆಸಿದರು.ಸಾಲದ ವಸೂಲಿಗಾಗಿ ಗ್ರಾಹಕರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು. ಸಿಬ್ಬಂದಿಯ ಮೂಲಕ ಅಥವಾ ರೌಡಿಗಳ ನೆರವಿನಿಂದ ವಸೂಲಾತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು 62 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಬೆಂಗಳೂರು ಮತ್ತು ಮೈಸೂರನ್ನು ಹೊರತುಪಡಿಸಿ, ತುಮಕೂರು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಸಾಲದ ಮರು ಪಾವತಿಗೆ ಒತ್ತಾಯಿಸುವಾಗ ಮಾನವೀಯತೆ ಮತ್ತು ಕಾನೂನಿನ ಮಿತಿಗಳನ್ನು ಉಲ್ಲಂಘಿಸಬಾರದು ಎಂದರು.ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಜೊತೆಗೆ, ತುಮಕೂರು ಎಸ್.ಪಿ ಅಶೋಕ್ ಕೆ.ವಿ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು ಈ ಸಭೆಗೆ ಹಾಜರಾಗಿದ್ದರು.ಸಭೆ ಬಳಿಕ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಜಿಲ್ಲಾಧಿಕಾರಿ ಹಾಗೂ ನನ್ನ ನೇತೃತ್ವದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಮೀಟಿಂಗ್ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸಭೆ ನಡೆಸಲಾಗಿದೆ ಎಂದರು.ಮೀಟಿಂಗ್ ನಲ್ಲಿ ಎಲ್ಲಾ ಮೈಕ್ರೋ ಫೈನಾನ್ಸ್ ಮಾಲೀಕರು, ರಿಜಿಸ್ಟರ್ ಆಫ್ ಕೋ ಆಪರೇಟಿವ್ ಸೊಸೈಟಿಸ್ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಗಳನ್ನು ಕರೆದು ಗೈಡ್ ಲೈನ್ಸ್ ಕೊಡಲಾಗಿದೆ. ಮೈಕ್ರೋ ಫೈನಾನ್ಸ್ ನಲ್ಲಿ ಕಿರುಕುಳ ಆಗಿದರೆ ನಮ್ಮಿಂದ ಏನು ಕಾನೂನು ಕ್ರಮ ಜರುಗಿಸಲಾಗುವುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು. ಅವರಿಂದಲೂ ಏನೇನು ಸಮಸ್ಯೆ ಬರ್ತಿದೆ ಎಂಬ ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕಿ ಅರಿವು ಮೂಡಿಸುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ಈ ಸಂಬಂಧ ನಾವು ಒಂದು ಕಾರ್ಯಾಚರಣೆ ಮಾಡುತ್ತೇವೆ. ಮೈಕ್ರೋ ಫೈನಾನ್ಸ್ ಕಿರುಕುಳ ಬೇರೆ ಇತರ ಮೀಟರ್ ಬಡ್ಡಿ, ಸೊಸೈಟಿ ಲೋನ್ ಆಗಲಿ ಇವೆಲ್ಲಾ ಕಿರುಕುಳ ಬರದ ಹಾಗೇ ನೋಡಿಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದರು.
ಲೈಸೆನ್ಸ್ ಇಲ್ಲದೆ ನಡೆಸುವುದಕ್ಕೆ ಸಾಧ್ಯವೇ ಇಲ್ಲ. ಆರ್ ಬಿಐ ಕೆಳಗಡೆ ಹಾಗೂ ಕೋ ಆಪರೇಟಿವ್ ಸೊಸೈಟಿ ಕೆಳಗಡೆ ರಿಜಿಸ್ಟರ್ ಆಗಿರಬೇಕು. ಇವೆರಡು ಇಲ್ಲದೇ ಯಾರು ಆಪರೇಟ್ ಮಾಡುವಂತಿಲ್ಲ ಎಂದ ಅವರು ಮೀಟರ್ ಬಡ್ಡಿ ಅವರ ಮೇಲು ಸಹ ಕೇಸ್ ಹಾಕುವುದಾಗಿ ತಿಳಿಸಿದರು. ಈಗ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಇದುವರೆಗೆ ನಮ್ಮ ಜಿಲ್ಲೆಯಲ್ಲಿ ಕಳೆದ ವರ್ಷ ಮೂರು ಕೇಸ್ ಆಗಿದೆ. ಈ ವರ್ಷ ಯಾವುದು ಇನ್ನು ರಿಜಿಸ್ಟರ್ ಆಗಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ವರ್ಷ ಯಾವುದೇ ಆತ್ಮಹತ್ಯೆ ಪ್ರಕರಣಗಳು ನಡೆದಿಲ್ಲ ಎಂದರು.