ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಹೆದ್ದಾರಿ ಪಕ್ಕದ ಚನ್ನಮ್ಮ ವರ್ತುಲದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಅಧಿಕಾರದ ಆಸೆಗಾಗಿ ಅಪಹರಣದಂತಹ ಕೃತ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಧಿಕಾರಿಗಳನ್ನು ಕೈಗೊಂಬೆಯಾಗಿಸಿಕೊಂಡು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿರುವುದು ದುರದೃಷ್ಟಕರ ಎಂದು ಕಿಡಿಕಾರಿದ ಅವರು, ಆಡಳಿತದಲ್ಲಿರುವವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸತ್ಯ ಬಚ್ಚಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಈ ಹಿಂದೆ ನಾಗರಾಜ ಅಸುಂಡಿಗೆ ಕಾಂಗ್ರೆಸ್ ಪಕ್ಷದ ಕೆಲವರಿಂದ ಆಮಿಷ ಬಂದಿದ್ದರೂ ಅವರು ಅದಕ್ಕೆ ಒಪ್ಪಿರಲಿಲ್ಲ. ಪಕ್ಷಕ್ಕೆ ನಿಷ್ಠರಾಗಿ ದುಡಿಯುವ ವ್ಯಕ್ತಿಯನ್ನು ಬಲವಂತವಾಗಿ ಅಪಹರಣ ಮಾಡುವ ಮೂಲಕ ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ಶಾಸಕರ ಮೂಗಿನ ನೇರಕ್ಕೆ ಇಂತಹ ದುಷ್ಕೃತ್ಯ ನಡೆಯುತ್ತಿದೆ. ಪೊಲೀಸರು ಹಾಗೂ ತಹಸೀಲ್ದಾರರು ಕೈಕಟ್ಟಿ ವಾಮಮಾರ್ಗದಿಂದ ಕಾಂಗ್ರೆಸ್ ಗೆಲ್ಲಲು ಪ್ರಯತ್ನಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಕೆಟ್ಟ ಕೆಲಸಕ್ಕೂ ಕೈ ಹಾಕಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಯಿಗಿಂತಲೂ ಜಗತ್ತಿನಲ್ಲಿ ಮತ್ತೊಂದಿಲ್ಲ. ನಿಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಜೀವಕ್ಕೆ ಅಂಜದೆ ಧಮಕಿ ಲೆಕ್ಕಿಸದೇ ಯಾರಿಗೂ ಬಗ್ಗದೆ ಅಪಹರಣಕಾರರನ್ನು ಒದ್ದಾದರೂ ಸರಿ ಬಂದು ನಿಮ್ಮ ತಾಯಿಯನ್ನು ಸೇರಿಕೊ ಎಂದು ಅಪಹರಣಕ್ಕೊಳಗಾದ ನಾಗರಾಜ ಅಸುಂಡಿಗೆ ಬಹಿರಂಗ ಸಭೆಯ ಮೂಲಕ ಕಿವಿಮಾತು ಹೇಳಿದರು.
ಇಂತಹ ಕೃತ್ಯಕ್ಕೆ ಕೈ ಹಾಕದೆ ಮುಂಬರುವ ಕಿತ್ತೂರು ವಿಜಯದ ದ್ವಿಶತಮಾನೋತ್ಸವ ಆಚರಣೆಯನ್ನು ವೈಭವದಿಂದ ನಡೆಸಲು ಪಯತ್ನಿಸಿ ಎಂದು ಹೇಳಿದ ಅವರು, ಅಪಹರಣಕ್ಕೊಳಗಾದ ನಾಗರಾಜ ಅಸುಂಡಿಯ ಲೊಕೇಶನ್ ನಮಗೆ ಸಿಕ್ಕಿದೆ. ಆದರೆ, ಇದು ಪೊಲೀಸರಿಗೆ ದೊತೆಯುತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.