ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬುಧವಾರ ಮುಸ್ಸಂಜೆಯ ಭಾಸ್ಕರನ ಹೊಂಗಿರಣದಲ್ಲಿ ಹೊನ್ನಿನತೇರಿನಂತೆ ರಥೋತ್ಸವ ಕಂಗೊಳಿಸಿತು. ಮಹಾದೇವಿ ಪುತ್ಥಳಿ ಮೇಲೆ ಸೂರ್ಯರಶ್ಮಿ ಪ್ರಜ್ವಲಿಸುವುದನ್ನು ಭಕ್ತರು ಕಣ್ತುಂಬಿಕೊಂಡರು. ಸಂಜೆ 5ಕ್ಕೆ ದೇವಿ ಮಹಾರಥೋತ್ಸವ ಜರುಗಿ ಸುಮಾರು 2 ಕಿ.ಮೀ.ದೂರದ ದೇವಿಯ ಮೂಲ ಗುಡಿಯವರೆಗೆ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದುಕೊಂಡು ಸಾಗಿದರು.
ರಥೋತ್ಸವಕ್ಕೂ ಮುನ್ನ ಮೂಲದೇವಿ ಹಾಗೂ ಉತ್ಸವಮೂರ್ತಿ ಚಿಕ್ಕಮ್ಮ ದೇವರಿಗೆ ವಿವಿಧ ಆಭರಣ, ವಸ್ತ್ರ, ಪುಷ್ಪಗಳಿಂದ ಶೃಂಗರಿಸಿ ಅಗ್ರಪೂಜೆ ಸಲ್ಲಿಸಿ ದೇಗುಲ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ದೇವಿಗೆ ಏಕಾರತಿ, ದಟ್ಟಾರತಿ, ನಿತ್ಯಕೈಂಕರ್ಯ ಪೂಜೆ, ಅಷ್ಟಾವಧನ ಸೇವೆ, ವಿಶೇಷ ಪೂಜೆ, ಮಹಾಪೂಜೆ, ಪಂಚಾಮೃತ ಅಭಿಷೇಕ ಜರುಗಿತು.ನಂತರ ದೇವಿಯನ್ನು ಹೊಸಬೀದಿ, ರಥಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿ ಸುತ್ತ ಮೆರವಣಿಗೆ ಮಾಡಲಾಯಿತು.ಪ್ರ ತಿ ಮನೆ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಕಟ್ಟಿ ದೇವಿಯನ್ನು ಬರಮಾಡಿಕೊಂಡು ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ, ಇಡುಗಾಯಿ ಹಾಕಿ ಧೂಪ, ದೀಪಧಾರತಿ ಬೆಳಗಿದರು.
ಜಿಲ್ಲೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು, ನವಜೋಡಿಗಳು ದಂಡಿಯಾಗಿ ಆಗಮಿಸಿದ್ದರು. ದಾರಿಯುದ್ದಕ್ಕೂ ದಾನಿಗಳು ರಸಾಯನ, ಪಾನಕ, ಕೋಸಂಬರಿ, ಚಿತ್ರನ್ನ, ಪುಳಿಯೋಗರೆ, ಮೊಸರನ್ನ, ನೀರು ಮಜ್ಜಿಗೆ, ಪಾನಕ ಸೇವೆ ಹಮ್ಮಿಕೊಂಡು ಭಕ್ತರದಾಹ ತಣಿಸಿದರು.