ಹಾನಗಲ್ಲ: ವೀರರಾಣಿ ಕಿತ್ತೂರು ಚೆನ್ನಮ್ಮ ಇತಿಹಾಸದ ದೊಡ್ಡ ಶಕ್ತಿ, ಸಿದ್ಧಾಂತಕ್ಕೆ ತಕ್ಕುದಾಗಿ ರಾಜ್ಯ ರಕ್ಷಣೆಗೆ, ಬ್ರಿಟಿಷರ ತಲೆದಂಡಕ್ಕೆ ದಿಟ್ಟ ಹೋರಾಟ ಮಾಡಿದ್ದಲ್ಲದೆ, ಶೌರ್ಯ-ಸಾಹಸದ ಮೂಲಕ ಇಡೀ ಮಹಿಳಾ ಸಮುದಾದ ಬೆಳ್ಳಿ ಚುಕ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹೇಳಿದರು.
ಬುಧವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತತ್ವ-ಸಿದ್ಧಾಂತಕ್ಕೆ ಬದ್ಧಳಾಗಿ, ಬ್ರಿಟಿಷರಿಗೆ ಶರಣಾಗದೆ ವೀರತ್ವ ಮೆರೆದ ವೀರರಾಣಿ ಕಿತ್ತೂರ ಚೆನ್ನಮ್ಮ ಈ ನಾಡಿಗೆ ಆದರ್ಶ. ಅವರ ಆದರ್ಶಗಳನ್ನು ಶೂರ ಪರಾಕ್ರಮಗಳನ್ನು ನಮ್ಮ ಮಕ್ಕಳಿಗೆ ಬೋಧಿಸುವ ಅಗತ್ಯವಿದೆ. ಮಹಾಪುರುಷರ ಜೀವನ ಸಾಧನೆಯನ್ನು ಎಲ್ಲರೂ ಅರಿಯುವ ಮೂಲಕ ಭಾರತದ ವೈಭವದ ಅಭಿವೃದ್ಧಿಗೆ ಸಾಕ್ಷಿಯಾಗಬೇಕು ಎಂದರು.ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ಮಹಾಪುರುಷರ ಜಯಂತಿ ಅರ್ಥಪೂರ್ಣಗೊಳ್ಳಲು ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದರು.
ಉತ್ತರ ಕರ್ನಾಟಕ ಹೋರಾಟ ವೇದಿಕೆ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಕಿತ್ತೂರು ಚೆನ್ನಮ್ಮನ ಬಗೆಗೆ ಮಾತನಾಡುವಾಗ ವೀರ ಸಂಗೊಳ್ಳಿ ರಾಯಣ್ಣನ ಬಗೆಗೆ ಮಾತನಾಡಲೇಬೇಕು. ಚೆನ್ನಮ್ಮನ ಬಲಗೈ ಬಂಟನಾಗಿ ವೀರ ಹೋರಾಟಗಾರನಾಗಿ, ಬ್ರಿಟಿಷ್ ಸೈನ್ಯದ ನಿದ್ರೆಗೆಡಿಸಿದ್ದನು. ಕಿತ್ತೂರಿನಲ್ಲಿ ಚೆನ್ನಮ್ಮನ ಸಾಹಸದ ಅಧ್ಯಯನ ಕೇಂದ್ರ ಹಾಗೂ ಅವಳ ಸಾಹಸ, ಹೋರಾಟದ ಪ್ರದರ್ಶನ ಏರ್ಪಡಿಸುವ ಅಗತ್ಯವಿದೆ. ಇದರೊಂದಿಗೆ ಕಿತ್ತೂರು ಅಭಿವೃದ್ಧಿಯಾಗಬೇಕು ಎಂದರು.ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಹದೇವಪ್ಪ ಬಾಗಸರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪುರ, ವಕೀಲ ರವಿಬಾಬು ಪೂಜಾರ, ಮಧು ಪಾಣಿಗಟ್ಟಿ, ಗಣ್ಯರಾದ ಸಿದ್ದಲಿಂಗಪ್ಪ ಕಮಡೊಳ್ಳಿ, ಸಿ. ಮಂಜುನಾಥ, ಕರಬಸಪ್ಪ ಶಿವೂರ, ಜಯಲಿಂಗಪ್ಪ ಹಳಕೊಪ್ಪ, ಪ್ರಕಾಶ ಬಣಕಾರ, ವಿಜಯಕುಮಾರ ದೊಡ್ಡಮನಿ, ಬಸವರಾಜ ಹಾದಿಮನಿ, ಗೀತಾ ಪೂಜಾರ, ನಿಜಲಿಂಗಪ್ಪ ಮುದೆಪ್ಪನವರ, ಆನಂದ ಹವಳಮ್ಮನವರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೈ.ಕೆ. ಜಗದೀಶ, ವಿ.ವಿ. ಸಾಲಿಮಠ, ಗಂಗಮ್ಮ ಹಿರೇಮಠ, ಮಂಜುನಾಥ ಬಣಕಾರ ಮೊದಲಾದವರಿದ್ದರು.