ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕೆಎನ್ಆರ್ ನಾಮಪತ್ರ

KannadaprabhaNewsNetwork |  
Published : Aug 11, 2025, 12:30 AM IST
ಕ್ಯಾಪ್ಶನ್........ತುಮಕೂರು ಡಿಸಿಸಿ ಬ್ಯಾಂಕ್ ಗೆ ನಾಮಪತ್ರ ಸಲ್ಲಿಸಿದ ಕೆ.ಎನ್. ರಾಜಣ್ಣ | Kannada Prabha

ಸಾರಾಂಶ

ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ನಡೆಯಲಿರುವ ನಿರ್ದೇಶಕರ ಸ್ಥಾನದ ಚುನಾವಣೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ನಡೆಯಲಿರುವ ನಿರ್ದೇಶಕರ ಸ್ಥಾನದ ಚುನಾವಣೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಾಮಪತ್ರ ಸಲ್ಲಿಸಿದರು. ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾವಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಂದಿನ 5 ವರ್ಷದ ಅವಧಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ ಉತ್ಸಾಹದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ ಎಂದರು.ಕಳೆದ 5 ವರ್ಷದ ಹಿಂದೆ ಅವಿರೋಧವಾಗಿ ಚುನಾವಣೆ ನಡೆದಿತ್ತು. ಅವಿರೋಧವಾಗಿ ಚುನಾವಣೆ ನಡೆಯುವುದರಿಂದ ತಾಲೂಕು, ಹೋಬಳಿ ಮಟ್ಟದ ಸಹಕಾರ ಸಂಘಗಳಲ್ಲಿ ಒಮ್ಮತದ ಅಭಿಪ್ರಾಯಗಳು ಮೂಡುತ್ತವೆ. ಯಾವುದೇ ವೈಷಮ್ಯ, ದ್ವೇಷ ಇರುವುದಿಲ್ಲ. ಅವಿರೋಧ ಆಯ್ಕೆಗೆ ನಮ್ಮ ಜಿಲ್ಲೆ ಮಾದರಿಯಾಗಿತ್ತು ತುಮಕೂರು ಜಿಲ್ಲೆ ಸಹಕಾರಿ ನಾಯಕತ್ವಕ್ಕೆ ಮಾದರಿಯಾಗಿದೆ. ಈ ಬಾರಿಯೂ ಅದೇ ರೀತಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲೂ ಚುನಾವಣಾ ಪ್ರಕ್ರಿಯೆ ಜರುಗುವುದಿಲ್ಲ ಎಂದು ನಂಬಿದ್ದೇನೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣದಲ್ಲಿ ಏನು ಆಗುತ್ತದೆ, ಏನು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ವಿಚಾರಗಳಿಗೆ ವಿಶೇಷವಾದ ಒತ್ತು ಕೊಡುವ ಅವಶ್ಯತೆ ಇಲ್ಲ ಎಂದರು.

ವಿಷ್ಣುವರ್ಧನ್ ಸ್ಮಾರಕ ನೆಲಸಮ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಅಭಿಮಾನ್ ಸ್ಟುಡಿಯೋದಲ್ಲಿ 2 ಎಕರೆ ಜಾಗ ಕೊಟ್ಟಿದ್ದರು ಎಂದು ನಾನು ಮಾಧ್ಯಮಗಳಲ್ಲಿ ಓದಿದ್ದೆ. ತಾತ್ಕಾಲಿಕವಾಗಿ ಸ್ಮಾರಕವನ್ನು ನಿರ್ಮಾಣ ಮಾಡಿದ್ದರು. ಆದರೆ ಆ ಜಾಗದವರು ಕೋರ್ಟ್ ಆದೇಶದ ಮೂಲಕ ಈಗ ಸ್ಮಾರಕ ನೆಲಸಮ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪತ್ರಿಕೆ, ಮಾಧ್ಯಮಗಳ ಮೂಲಕ ಓದಿದ್ದೇನೆ. ನನಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.ಪ್ರಧಾನಿಗಳು ದಿನಕ್ಕೆ ಒಂದೊಂದು ರೈಲು ಬಿಡುತ್ತಾರೆ. ಭದ್ರಾಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇನೆ ಎಂದು ರೈಲು ಬಿಟ್ಟಿಲ್ಲ ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯದಿಂದ ಸೋಮಣ್ಣನವರು ರೈಲ್ವೆ ಮತ್ತು ಜಲಶಕ್ತಿ ಸಚಿವರಾಗಿದ್ದಾರೆ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡಲು ಎಲ್ಲ ಸಚಿವರಿಗೂ ಓದಿಕೊಂಡು ಬನ್ನಿ ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಆ. 16 ರಂದು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡಲು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಅಂದು ಅಂತಿಮ ನಿರ್ಣಯವಾಗಲಿದೆ ಎಂದರು. ಕೇಂದ್ರದಲ್ಲಿ ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಆಡಳಿತ ನಡೆಸಿದೆ. ಯಾವತ್ತೂ ಕೂಡ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ.ಗಳನ್ನು ದುರುಪಯೋಗಪಡಿಸಿಕೊಂಡಿಲ್ಲ. ಆದರೆ ಬಿಜೆಪಿಯವರು ಈ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ನಾಮಪತ್ರ ಸಲ್ಲಿಸಿದವರ ವಿವರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎ ವರ್ಗದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ತಿಪಟೂರಿನ ಶಾಸಕ ಕೆ. ಷಡಕ್ಷರಿ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಚಿ.ನಾ.ಹಳ್ಳಿಯ ಎಸ್.ಆರ್. ರಾಜಕುಮಾರ್, ಕುಣಿಗಲ್‌ನ ಬಿ. ಶಿವಣ್ಣ, ಪ್ರಮೋದ್ ಎಸ್., ಮಧುಗಿರಿಯ ಜಿ.ಜೆ. ರಾಜಣ್ಣ, ತುರುವೇಕೆರೆ ಎಂ. ಸಿದ್ದಲಿಂಗಪ್ಪ, ಸಿರಾ ಜಿ.ಎಸ್. ರವಿ, ಕೊರಟಗೆರೆ ಎಸ್. ಹನುಮಾನ್, ಗುಬ್ಬಿ ಹೆಚ್.ಸಿ. ಪ್ರಭಾಕರ್, ಬಿ ವರ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಟಿಎಪಿಸಿಎಂಎಸ್‌ನಿಂದ ಆರ್. ರಾಜೇಂದ್ರ, ಸಿ ವರ್ಗದಲ್ಲಿ ಪತ್ತಿನ ಸಹಕಾರ ಸಂಘದ ಎಸ್. ಲಕ್ಷ್ಮೀನಾರಾಯಣ್, ಡಿ ವರ್ಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿ. ನಾಗೇಶ್‌ಬಾಬು, ಡಿ (೧) ರಲ್ಲಿ ಮಹಿಳಾ ಸಹಕಾರ ಸಂಘದಿಂದ ಮಾಲತಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!