ದುಗ್ಗಳ ಸದಾನಂದ
ಇಲ್ಲಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಬುಧವಾರದ ಪಂದ್ಯಗಳಲ್ಲಿ ಬಿರುಸಿನ ಪೈಪೋಟಿ ಕಂಡುಬಂತು. ಮೂರು ಪ್ರಿ ಕ್ವಾಟರ್ ಫೈನಲ್ ಪಂದ್ಯಗಳು ನಡೆದವು. ಕುಲ್ಲೆಟಿರ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ 3-0 ಅಂತರದ ಗೆಲವು ಸಾಧಿಸಿತು. ಕುಲ್ಲೇಟಿರ ತಂಡದ ಆಟಗಾರ ಕುಲ್ಲೇಟಿರ ರೋಷನ್ ಹತ್ತನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದರು. 46ನೇ ನಿಮಿಷದಲ್ಲಿ ಕುಲ್ಲೇಟಿರ ಅರ್ಜುನ್ ಗೋಲು ದಾಖಲಿಸಿದರು. 49ನೇ ನಿಮಿಷದಲ್ಲಿ ಕುಲ್ಲೇಟಿರ ಸಚಿತ್ ಗೋಲು ದಾಖಲಿಸಿದರು. ಕುಲ್ಲೇಟಿರ ತಂಡದ ಆಟಗಾರರು ಗಳಿಸಿದ ಮೂರು ಗೋಲುಗಳ ನೆರವಿನಿಂದ ಗೆಲವು ಸಾಧಿಸಿತು.
ಚೆಪ್ಪುಡಿರ ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಕ್ಕೆರ ವಿರುದ್ಧ ಚೆಪ್ಪುಡಿರ ಗೆಲವು ಸಾಧಿಸಿತು. ಚೆಪ್ಪುಡಿರ ತಂಡದ ಆಟಗಾರರಾದ ಗಗನ್ ಬೆಳ್ಯಪ್ಪ ಮೊದಲ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರು. 19ನೇ ಹಾಗೂ 33ನೇ ನಿಮಿಷದಲ್ಲಿ ಚೇತನ್ ಎರಡು ಗೋಲು ದಾಖಲಿಸಿದರು. ಚೆಪ್ಪಡಿರ ಕಾರ್ಯಪ್ಪ 50ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲವು ತಂದು ಕೊಟ್ಟರು.ಮೂರನೇ ಪಂದ್ಯದಲ್ಲಿ ಬೊವೇರಿಯಂಡ ಐಚೆಟ್ಟಿರ ವಿರುದ್ಧ ಗೆಲವು ಸಾಧಿಸಿತು. ಬೋವೇರಿಯಂಡ ತಂಡದ ಚೇತನ್ ಕಾಳಪ್ಪ, ಗ್ಯಾನ್ ಉತ್ತಪ್ಪ ತಂಡಕ್ಕೆ ಎರಡು ಗೋಲು ಗಳಿಸಿಕೊಟ್ಟರು. ಐಚಂಡ ತಂಡದ ಪರವಾಗಿ ಲೆಹರ್ ತಿಮ್ಮಯ್ಯ ಒಂದು ಗೋಲು ಗಳಿಸಿದರು.
ಗುರುವಾರ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪಂದ್ಯಗಳು ನಡೆಯುವುದಿಲ್ಲ.
ಇಂದಿನ ಪಂದ್ಯಗಳು
11 ಗಂಟೆಗೆ: ಚೇನಂಡ-ಬೊವ್ವೇರಿಯಂಡ
2 ಗಂಟೆಗೆ: ನೆರವಂಡ-ಕುಪ್ಪಂಡ (ಕೈಕೇರಿ)