ಕನ್ನಡಪ್ರಭ ವಾರ್ತೆ ಚಿಂಚೋಳಿ
ಚಿಂಚೋಳಿ ಮೀಸಲು ಮತಕ್ಷೇತ್ರದ ಅತ್ಯಂತ ದೊಡ್ಡ ಗ್ರಾಮವಾಗಿರುವ ಕೋಡ್ಲಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ವೃತ್ತವನ್ನು ಸೌಂದರೀಕರಣಗೊಳಿಸುವುದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ೨೦೨೨-೨೩ನೇ ಸಾಲಿನ ಯೋಜನೆ ಅಡಿಯಲ್ಲಿ ₹೨.೫೦ಕೋಟಿ ಮಂಜೂರಿಯಾಗಿದೆ.
ಆದರೆ ಗುತ್ತಿಗೆದಾರರ ನಿರ್ಲಕ್ಷತನದಿಂದಾಗಿ ಕಾಮಗಾರಿ ಅಭಿವೃದ್ಧಿ ಇಲ್ಲದಿರುವ ಕಾರಣ ರಸ್ತೆ ಅಗಲೀಕರಣಗೊಳಿಸದ ಸ್ಥಳಗಳಲ್ಲಿ ಭಾರೀ ತೆಗ್ಗುಗಳು ಬಿದ್ದಿರುವುದರಿಂದ ಕಲಬುರಗಿ, ಕಾಳಗಿ, ಮಹಾಗಾಂವ, ಹುಮನಾಬಾದ, ಚಿಂಚೋಳಿ ನಗರ ಪ್ರದೇಶಗಳಿಗೆ ಸಂಚರಿಸುವ ವಾಹನಗಳಿಗೆ ತೊಂದರೆ ಆಗಿದೆ. ಕೋಡ್ಲಿ ವೃತ್ತದಲ್ಲಿ ಚರಂಡಿ ನಿರ್ಮಾಣ ಅರ್ಧಮಟ್ಟಕ್ಕೆ ನಿಲ್ಲಿಸಲಾಗಿದೆ. ಆದರೆ ಚರಂಡಿಯಲ್ಲಿ ಮಳೆ ನೀರು ನಿಂತುಕೊಂಡಿದ್ದರಿಂದ ಅಕ್ಕಪಕ್ಕದ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಗಬ್ಬು ವಾಸನೆ ಮತ್ತು ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಕೋಡ್ಲಿ ಗ್ರಾಮದ ಅಲೀಮ ನಾಯಕೋಡಿ ದೂರಿದ್ದಾರೆ.ಕೋಡ್ಲಿ ವೃತ್ತದಲ್ಲಿ ನಗರ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಹಣ್ಣಿನ ಅಂಗಡಿ, ಚಹಾ ಅಂಗಡಿ, ಹೂವು ಅಂಗಡಿಗಳ ಮಾರಾಟಗಾರರಿಗೆ ತೊಂದರೆ ಆಗುತ್ತಿದೆ. ಜನರು ನಿಲ್ಲಲು ಸಹಾ ಸ್ಥಳ ಇಲ್ಲ ಸುತ್ತಲು ಗುಂಡಿ ತೋಡಿದ್ದರಿಂದ ಶಾಲೆ ಕಾಲೇಜಿಗೆ ಮತ್ತು ಆಸ್ಪತ್ರೆಗೆ ಬರುವ ಜನರು ತೊಂದರೆ ಪಡಬೇಕಾಗಿದೆ ಎಂದು ಕೋಡ್ಲಿ ಗ್ರಾಮದ ರೇವಣಸಿದ್ದಪ್ಪ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಡ್ಲಿ-ಕಾಳಗಿ,ಮಹಾಗಾಂವ,ಚಿಂಚೋಳಿ ರಸ್ತೆ ಸಂಚಾರಕ್ಕೆ ಇದೇ ಏಕೈಕ ಮಾರ್ಗ ಆಗಿರುವುದರಿಂದ ಪ್ರಯಾಣಿಕರು,ವಾಹನಗಳ ಸವಾರರು ತೊಂದರೆ ಪಡಬೇಕಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕೋಡ್ಲಿ ಗ್ರಾಮದ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಚಿಂತಕೋಟಿ ದೂರಿದ್ದಾರೆ.