ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ತಂಡಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೋಳಾಲ ಗಂಗಾಧರ್, ಉಪಾಧ್ಯಕ್ಷರಾಗಿ ಚನ್ನಕೇಶವ ಆಯ್ಕೆಯಾದರು. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೊಡಗೀಹಳ್ಳಿ ಸಿದ್ದಲಿಂಗಪ್ಪನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಅವರ ವಿರೋಧಿ ತಂಡ ಗೆಲುವು ಸಾಧಿಸಿರುವುದು ಸಿದ್ದಲಿಂಗಪ್ಪನವರಿಗೆ ಮುಜುಗರ ತಂದಿದೆ.ಸಂಘದ 12 ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್ ನ ಸಿಬ್ಬಂದಿಯೋರ್ವರು ಸೇರಿ ಒಟ್ಟು 13 ಮಂದಿ ಮತ ಚಲಾಯಿಸಬೇಕಿತ್ತು. ಸಿದ್ದಲಿಂಗಪ್ಪನವರ ವಿರೋಧಿ ಬಣದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕೋಳಾಲ ಗಂಗಾಧರ್ ರವರಿಗೆ 7 ಮತಗಳು, ಸಿದ್ದಲಿಂಗಪ್ಪನವರ ತಂಡದಲ್ಲಿ ಗುರುತಿಸಿಕೊಂಡಿದ್ದ ದಯಾನಂದ್ ರವರಿಗೆ 6 ಮತಗಳು ಲಭಿಸಿದವು. ಹೀಗಾಗಿ ಕೋಳಾಲ ಗಂಗಾಧರ್ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ದಲಿಂಗಪ್ಪ ಬಣದ ರೇಣುಕಾ ರವರಿಗೆ 6 ಮತಗಳು, ವಿರೋಧಿ ಬಣದ ಚನ್ನಕೇಶವ ಯವರಿಗೆ 7 ಮತಗಳು ಲಭಿಸಿದವು. ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀನಿವಾಸ್ ರವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ತಮ್ಮ ಗೆಲುವಿಗೆ ಕಾರಣರಾದ ಸಹಕಾರ ಸಚಿವ ಕೆ.ಎನ್, ರಾಜಣ್ಣನವರು ಮತ್ತು ವಿಧಾನಪರಿಷತ್ ನ ಮಾಜಿ ಸದಸ್ಯರಾದ ಬೆಮಲ್ ಕಾಂತರಾಜ್ ರವರಿಗೆ ನೂತನ ಅಧ್ಯಕ್ಷ ಕೋಳಾಲ ಗಂಗಾಧರ್ ಮತ್ತು ಉಪಾಧ್ಯಕ್ಷ ಚನ್ನಕೇಶವ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೂವನಹಳ್ಳಿ ದೇವರಾಜ್ ಅಭಿನಂದಿಸಿದರು. ಚುನಾವಣೆಯಲ್ಲಿ ಸದಸ್ಯರಾದ ಕೋಳಾಲ ಗಂಗಾಧರ್, ಚನ್ನಕೇಶವ, ಜಿ.ಅಶ್ವತ್ಥ್ ಕುಮಾರ್, ರಾಮಲಿಂಗೇಗೌಡ, ಕೋಳಾಲ ರಘು, ಶಂಕರನಾಯಕ್, ದಯಾನಂದ್, ಶಿವಾನಂದ್, ದಾನಯ್ಯ, ರೇಣುಕಾ, ಸುಕನ್ಯ, ಪವಿತ್ರಾ ಭಾಗವಹಿಸಿದ್ದರು. ಸಂಘದ ಸಿಇಓ ಜಯಣ್ಣ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.