ಕನ್ನಡಪ್ರಭ ವಾರ್ತೆ ಕೋಲಾರ ನಗರದ ಅಂತರಗಂಗೆ ರಸ್ತೆಯ ಕುವೆಂಪು ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಪಾರ್ಕಿನ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪುತ್ಥಳಿ ಕಿಡಿಗೇಡಿಗಳು ವಿರೂಪಗೊಳಿಸಿದ್ದರೂ ನಗರಸಭೆ ಮಾತ್ರ ಮೌನವಾಗಿದೆ. ಪಾರ್ಕಿನ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ವರನಟ ಡಾ.ರಾಜಕುಮಾರ್ ಪುತ್ಥಳಿಗಳು ಇದ್ದು, ಇವುಗಳಿಗೆ ಯಾವುದೇ ಭದ್ರತೆ ಇಲ್ಲ.ದಂತೆ ಆಗಿದೆ. ಕುವೆಂಪು ಪುತ್ಥಳಿ ವಿರೋಪಗೊಳಿಸಿರುವುದನ್ನು ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಖಂಡಿಸಿವೆ. ನಗರಸಭೆ ವ್ಯಾಪ್ತಿಗೆ ಸೇರಿದ ಕುವೆಂಪು ಪಾರ್ಕ್ ನಿರ್ವಹಣೆ ಮತ್ತು ಭದ್ರತೆ ಇಲ್ಲದ ಕಾರಣ ವಿದ್ಯಾರ್ಥಿಗಳು, ನಿರುದ್ಯೋಗಿಗಳು ಕಾಲಹರಣ ಮಾಡುವ ಸ್ಥಳವಾಗಿ ಪರಿಣಿಮಿಸಿದೆ. ಬೆಳಗಿನ ಸಂಜೆ ಹಾಗೂ ಬಿಡುವಿನ ವೇಳೆಯಲ್ಲಿ ಸಾರ್ವಜನಿಕರು ಮತ್ತು ವಯೋವೃದ್ಧರು ವಾಯು ವಿಹಾರಕ್ಕಾಗಿ ಪಾರ್ಕಿಗೆ ಬಂದಾಗ ಯುವಕರ ಗುಂಪುಗಳಾಗಿ ಹುಟ್ಟಿದ ಹಬ್ಬ ಆಚರಿಸುವುದು, ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸುವುದರಿಂದ ವಾಯು ವಿಹಾರಕ್ಕಾಗಿ ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.ಪಾರ್ಕಿನಲ್ಲಿ ಸ್ವಚ್ಛತೆ ಕಣ್ಮರೆಇತ್ತೀಚೆಗೆ ಮಳೆ ಸುರಿಯುತ್ತಿರುವುದರಿಂದ ಪಾರ್ಕ್ನಲ್ಲಿ ನೀರು ತುಂಬಿಕೊಂಡು ಕೆಸರು ಗದ್ದೆಯಂತಾಗಿದೆ, ಮಳೆನೀರು ಸರಾಗವಾಗಿ ಹೋಗಲು ಕಾಲುವೆ ವ್ಯವಸ್ಥೆಗಳು ಕಲ್ಪಿಸಿಲ್ಲ. ಪಾರ್ಕಿನಲ್ಲಿರುವ ಕಲ್ಲಿನ ಬೆಂಚುಗಳನ್ನು ಮುರಿದಿರುವ ಕಾರಣ ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿಲ್ಲದಂತಾಗಿದೆ. ಪಾರ್ಕಿನ ಸುತ್ತಲೂ ಇರುವ ಚರಂಡಿಯ ಮೇಲೆ ಅಂಗಡಿ ಮತ್ತು ಹೋಟೆಲ್ಗಳು ತಲೆ ಎತ್ತಿದ್ದು, ಅವುಗಳ ತ್ಯಾಜ್ಯವನ್ನು ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಇದರಿಂದಾಗಿ ಚರಂಡಿಯಲ್ಲಿರುವ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೆ ದುರ್ವಾಸನೆ ಬೀರುತ್ತಿದೆ. ವಾಯುವಿಹಾರ ಮಾಡುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ.