ಮಂಗಳೂರು: ನಮ್ಮ ಅಸ್ಮಿತೆ ಕೊಂಕಣಿ. ನಾನು ಕೊಂಕಣಿಗ ಎಂದು ಹೆಮ್ಮೆ ಪಡುವುದು ಭಾಷೆಯ ಉಳಿವಿಗೆ ಮೊದಲ ಹೆಜ್ಜೆ. ಇಂದಿನ ಝೆನ್ ಜೀ ಪೀಳಿಗೆಯವರಾದ ನೀವು ಯಾವುದೇ ಸಮುದಾಯದವರಾದರೂ, ಧರ್ಮದವರಾದರೂ, ಎಲ್ಲರನ್ನು ಬೆಸೆಯುವ ಸೇತುವೆ ಕೊಂಕಣಿ ಎಂಬ ಅರಿವು ಬೆಳೆಸಿದರೆ, ಕೊಂಕಣಿ ಭಾಷೆ, ಕಲೆ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರತಿಜ್ಞೆಯನ್ನು ಕೈಗೊಂಡರೆ ಹಾಗೂ ಅದಕ್ಕಾಗಿ ಶ್ರಮಿಸಿದರೆ ನಮ್ಮ ಭಾಷೆ ಖಂಡಿತಾ ಉಳಿಯಲಿದೆ, ಬೆಳೆಯಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲ ಡಾ ಜಯವಂತ ನಾಯಕ್ ಹೇಳಿದರು.ಅವರು ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ನಡೆಸಿದ 35 ನೇ ಕೊಂಕಣಿ ಮಾನ್ಯತಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಗೌರವ ಅತಿಥಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಸ್ಪರ್ಧೆಗಳ ತೀರ್ಪುದಾರರನ್ನು ಗೌರವಿಸಿ ಮಾತನಾಡಿದರು. ಈ ದಿನಗಳಲ್ಲಿ ನಮ್ಮ ದೇಶದಲ್ಲಿ ಸಾಧಿಸುವ ಛಲ ಇರುವ ಹೊಸ ಪೀಳಿಗೆ ಉದಿಸಿದೆ. ಜಿರಲೆ ಎನ್ನಿ, ಝೆನ್ ಜೀ ಎನ್ನಿ, ಯಾವುದಕ್ಕೂ ಸೈ ಎನ್ನುವ ನಿಮಗೆ ಸಣ್ಣ ಜವಾಬ್ದಾರಿ. ಕೊಂಕಣಿಗರೊಡನೆ ಕೊಂಕಣಿ ಭಾಷೆಯಲ್ಲಿಯೇ ವ್ಯವಹರಿಸಿ. ಇದರಿಂದ ಕೊಂಕಣಿ ಭಾಷೆ ಹೊಸ ಎತ್ತರಕ್ಕೆ ಏರಲಿದೆ. ಇದು ಕೊಂಕಣಿಗೆ ನಿಮ್ಮ ಕೊಡುಗೆಯಾಗಲಿದೆ. ಎಂದು ಹೇಳಿದರು.ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರೌಢಶಾಲಾ ವಿಭಾಗದಲ್ಲಿ ಏಳು ಮತ್ತು ಪಿಯು-ಡಿಗ್ರಿ ವಿಭಾಗದಲ್ಲಿ ಹತ್ತು ತಂಡಗಳ ನಡುವೆ ನಡೆದ ವಿವಿಧ ವಿನೋದಾವಳಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯಕ್ರಮ ನಿರೂಪಣೆಯಲ್ಲಿ ಪ್ರಥಮ - ಸಂಜನಾ ಮತಾಯಸ್ (ಸಂತ ಜೋಸೆಫ್ಸ್ ಕುಲಶೇಖರ), ದ್ವಿತೀಯ - ಪ್ರೀವಲ್ ಪಿಂಟೊ ಹಾಗೂ ಕ್ಯಾರಲಿನ್ ಫೆರ್ನಾಂಡಿಸ್ (ಹೋಲಿ ಫ್ಯಾಮಿಲಿ, ಸುರತ್ಕಲ್) ಮತ್ತು ತೃತೀಯ – ರಿಶನ್ ಫೆರ್ನಾಂಡಿಸ್ (ಸೈಂಟ್ ಆಗ್ನೆಸ್ ಕೇಂದ್ರೀಯ, ಬೆಂದೂರು) ಬಹುಮಾನ ಪಡೆದರೆ, ಕಾಲೇಜು ವಿಭಾಗದಲ್ಲಿ ಪ್ರಥಮ – ವಿಲೊನಾ ಲಸ್ರಾದೊ (ಕಾರ್ಮೆಲ್ ಕಾಲೇಜು, ಮೊಡಂಕಾಪು), ದ್ವಿತೀಯ – ಫ್ಲೊಯ್ಡ್ ಪಿಂಟೊ (ಮಿಲಾಗ್ರಿಸ್, ಹಂಪನಕಟ್ಟೆ) ಮತ್ತು ತೃತೀಯ ಶಾನಿಯಾ ಡಿಸೋಜ (ಸೈಂಟ್ ಆಗ್ನೆಸ್, ಬೆಂದೂರು) ಬಹುಮಾನ ಪಡೆದರು.