ಕೊಪ್ಪಳ: ತುಮಕೂರಿನಲ್ಲಿ ನಡೆದ ಕರ್ನಾಟಕ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಬಾಗಲಕೋಟೆ ತಂಡವನ್ನು ಸೋಲಿಸುವ ಮೂಲಕ ಕೊಪ್ಪಳ ತಂಡ ಗೆಲುವು ಸಾಧಿಸಿ, ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.ಬಾಗಲಕೋಟೆ ಮತ್ತು ಕೊಪ್ಪಳ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಪ್ಪಳ ಪ್ರತಿ ಬಾರಿಯೂ ಮೈಲುಗೈ ಸಾಧಿಸಿ, 26-3 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದೆ.ಇದಕ್ಕೂ ಮೊದಲು ಕೊಪ್ಪಳ ತಂಡ ಲೀಗ್ ಪಂದ್ಯದಲ್ಲಿ ತುಮಕೂರು ಹಾಗೂ ಹಾಸನ ತಂಡವನ್ನು ಮಣಿಸಿ ಸೆಮಿಫೈನಲ್ ಪಂದ್ಯವನ್ನು ದಕ್ಷಿಣ ಕನ್ನಡ ತಂಡದೊಂದಿಗೆ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತು.ಕೊನೆಗೆ ಅಂತಿಮವಾಗಿ ಕೊಪ್ಪಳ ತಂಡ 26-3 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ, ರಾಷ್ಟ್ರಮಟ್ಟಕ್ಕೆ ಆರ್ಹತೆ ಪಡೆಯಿತು.8 ವರ್ಷದ ಫಲ: ಕೊಪ್ಪಳ ತಂಡ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡಿ, ರಾಜ್ಯಮಟ್ಟದ ವರೆಗೂ ಆಯ್ಕೆಯಾಗುತ್ತಿತ್ತು. ರಾಜ್ಯಮಟ್ಟದ ಪಂದದಲ್ಲಿ ಸೆಮಿಫೈನಲ್ನಲ್ಲಿ ಸೋಲುಣ್ಣುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಅರ್ಹತೆ ತಪ್ಪಿಸಿಕೊಳ್ಳುತ್ತಿತ್ತು. ಹೀಗೆ ಎಂಟು ಬಾರಿ ಹಿನ್ನಡೆ ಅನುಭವಿಸಿದ್ದ ಕೊಪ್ಪಳ ತಂಡ ಈ ಬಾರಿ ರಾಜ್ಯಮಟ್ಟದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.ತಂಡದ ನಾಯಕ ಕೃಷ್ಣಾ ರಾಥೋಡ, ಶಿಕ್ಷಕ ಹುಲಗಪ್ಪ, ಹುಸೇನ ಪಾಷಾ, ವಿಷ್ಣು, ನಾಗರಾಜ ಕುಷ್ಟಗಿ, ಅಕ್ಷಯ, ಹನುಮಂತ ಎನ್ನುವ ನೌಕರರು ಕೊಪ್ಪಳ ತಂಡ ಪ್ರತಿನಿಧಿಸಿದ್ದರು.
ಕಬಡ್ಡಿಯಲ್ಲಿ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಕೊಪ್ಪಳ ತಂಡ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದು ಬಹಳ ಸಂತೋಷವಾಗಿದೆ. ಸತತ 8 ವರ್ಷಗಳ ಪ್ರಯತ್ನದ ಫಲ ಕೈಗೂಡಿದಂತಾಗಿದೆ.- ನಾಗರಾಜ ಜುಮ್ಮನ್ನವರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ