ಕನ್ನಡಪ್ರಭ ವಾರ್ತೆ ಕುಕನೂರು
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಚಾಲನೆ ನೀಡಲಾಯಿತು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸ್ವಾಭಿಮಾನಕ್ಕಾಗಿ ನಡೆದ ಯುದ್ಧ ಕೋರೆಗಾಂವ್ ವಿಜಯೋತ್ಸವ. ಮಹಾರಾಷ್ಟ್ರದ ಭೀಮ ನದಿಯ ದಡದಲ್ಲಿ 1818, ಜ. 1ರಂದು 500 ಮಹಾರ್ ಸೈನಿಕರು 28 ಸಾವಿರ ಪೇಶ್ವೆಗಳ ನಡುವೆ ಕದನ ಜರುಗಿದ್ದು, ವೀರ ಸೈನಿಕರ ಸ್ಮರಣಾರ್ಥ ವಿಜಯೋತ್ಸವ ಇದಾಗಿದೆ ಎಂದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಮಾತನಾಡಿ, ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ ಎಂದರು. ಕೋರೆಗಾಂವ್ ಯುದ್ಧದಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದ 500 ಮಹಾರ್ ಸೈನಿಕರ ಪೈಕಿ 22 ಮಂದಿ ಸೈನಿಕರು ಮರಣ ಹೊಂದುತ್ತಾರೆ. ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾ ಸ್ಮಾರಕವನ್ನು 1821, ಮಾ. 26ರಂದು ಬ್ರಿಟಿಷ್ ಸರ್ಕಾರ ನಿರ್ಮಾಣ ಮಾಡಿದೆ. ಆ ಸ್ಥಳದಲ್ಲಿ ಮಡಿದ 22 ಸೈನಿಕರ ಹೆಸರನ್ನು ಕೆತ್ತಿಸಲಾಗಿದೆ ಎಂದರು.
ಈ ವೇಳೆ ವಿಜಯೋತ್ಸವ ಆಚರಣೆಯಲ್ಲಿ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ದಲಿತ ಮುಖಂಡರಾದ ನಾಗಪ್ಪ ಕಲ್ಮನಿ, ಹನುಮಂತಪ್ಪ ಚಲವಾದಿ, ಯಲ್ಲಪ್ಪ ಕಲ್ಮನಿ, ರಾಮಣ್ಣ ಬಂಕದಮನಿ, ನಿಂಗಪ್ಪ ಗೊರ್ಲೆಕೊಪ್ಪ, ರಮೇಶ ಶಾಸ್ತ್ರೀ, ಫಕೀರಪ್ಪ ಸಾಲ್ಮನಿ, ಜುಂಜಪ್ಪ ಸಾಲ್ಮನಿ, ಈರಪ್ಪ ಕಾಳಿ, ಲಕ್ಷ್ಮಣ ಸಾಲ್ಮನಿ, ಉಮೇಶ ಚಲವಾದಿ, ಹನುಮಂತಪ್ಪ ಜಕ್ಲಿ, ನಿಂಗಪ್ಪ ಘಾಟಿ ಸೇರಿದಂತೆ ಪ್ರಗತಿಪರರಾದ ವೀರೇಶ ಸಬರದ, ಜಗದೀಶ ಜವಳಿ, ಪಂಚಯ್ಯ ಹಿರೇಮಠ ಹಾಗೂ ಅನೇಕ ಯುವಕರು ಸಮಾಜದವರು ಇತರರು ಇದ್ದರು.