ಕೃಷ್ಣೆಯ ಪ್ರವಾಹ ಇ‍ಳಿಕೆ; ನದಿ ಪಾತ್ರದ ಜನರ ನಿಟ್ಟುಸಿರು

KannadaprabhaNewsNetwork |  
Published : Jul 31, 2024, 01:02 AM IST
ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದ ಮುಖ್ಯ 30 ಕ್ರಸ್ಟ್ ಗೇಟ್ ಗಳ ಮೂಲಕ ಧುಮ್ಮಿಕ್ಕುತ್ತಿರುವ ಜಲರಾಶಿ. | Kannada Prabha

ಸಾರಾಂಶ

3 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ಒಳಹರಿವು ಇದ್ದ ಬಸವಸಾಗರ ಜಲಾಶಯದಲ್ಲಿ ಸೋಮವಾರ ಸಂಜೆ ನೀರಿನ ಒಳಹರಿವಿನಲ್ಲಿ ಕೊಂಚ ಇಳಕೆ ಕಂಡುಬಂದಿದ್ದು, ನೆರೆ ಭೀತಿಯಿಂದ ಆತಂಕಗೊಂಡಿದ್ದ ನದಿ ತೀರದ ಗ್ರಾಮಗಳ ಜನರಿಗೆ ಸ್ವಲ್ಪ ನಿರಾಳತೆ ನೀಡಿದೆ.

ಕನ್ನಡಪ್ರಭ ವಾರ್ತೆ ಕೊಡೇಕಲ್

3 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ಒಳಹರಿವು ಇದ್ದ ಬಸವಸಾಗರ ಜಲಾಶಯದಲ್ಲಿ ಸೋಮವಾರ ಸಂಜೆ ನೀರಿನ ಒಳಹರಿವಿನಲ್ಲಿ ಕೊಂಚ ಇಳಕೆ ಕಂಡುಬಂದಿದ್ದು, ನೆರೆ ಭೀತಿಯಿಂದ ಆತಂಕಗೊಂಡಿದ್ದ ನದಿ ತೀರದ ಗ್ರಾಮಗಳ ಜನರಿಗೆ ಸ್ವಲ್ಪ ನಿರಾಳತೆ ನೀಡಿದೆ.

ಕಳೆದ ಕೆಲ ದಿನಗಳಿಂದ ಆಲಮಟ್ಟಿ ಮೂಲಕ ಅಪಾರ ಪ್ರಮಾಣದ ನೀರಿನ ಒಳಹರಿವು ಉಂಟಾಗಿದ್ದರಿಂದ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳ ಜನರು ಆತಂಕಗೊಂಡಿದ್ದರು.

ಶುಕ್ರವಾರ ಸಂಜೆವರೆಗೆ 2.70 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿದ್ದ ಜಲಾಶಯಕ್ಕೆ ಶನಿವಾರದಿಂದ 3 ಲಕ್ಷ ಕ್ಯುಸೆಕ್ ಪ್ರಮಾಣದ ನೀರಿನ ಒಳ ಹರಿವು ಉಂಟಾಗಿ ಕ್ರಮೇಣವಾಗಿ ಒಳಹರಿವು ಜಾಸ್ತಿಯಾಗಿತ್ತು. 3.27 ಲಕ್ಷ ಕ್ಯುಸೆಕ್‌ವರೆಗೆ ಏರಿಕೆಯಾದ ಕಾರಣ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ನದಿಗೆ ಒಳಹರಿವಿನಷ್ಟೆ ಪ್ರಮಾಣದ ನೀರನ್ನು ಜಲಾಶಯದ 30 ಮುಖ್ಯ ಕ್ರಸ್ಟ್ ಗೇಟ್ ಮೂಲಕ ಹರಿಸಲಾಗುತ್ತಿತ್ತು. ಆದರೆ, ಸೋಮವಾರ ಬೆಳಗ್ಗೆ 3 ಲಕ್ಷ ಒಳಹರಿವಿನಿಂದ ಕೂಡಿದ್ದ ಜಲಾಶಯ ಸಂಜೆ ವೇಳೆಗೆ ಒಳಹರಿವಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಸೋಮವಾರ ಬೆಳಿಗ್ಗೆ ಜಲಾಶಯಕ್ಕೆ 2.90 ಲಕ್ಷ ಕ್ಯುಸೆಕ್ ನೀರಿನ ಒಳಹರಿವು ಉಂಟಾಗಿರುವ ಕಾರಣ ನದಿಗೆ ಹರಿಸಲಾಗುತ್ತಿದ್ದ ಹೊರ ಹರಿವನ್ನು ಕಡಿಮೆಗೊಳಿಸಲಾಗಿದೆ. 2.70,180 ಕ್ಯುಸೆಕ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಇನ್ನು ಹೆಚ್ಚಿನ ಪ್ರವಾಹದ ಭೀತಿಯಲ್ಲಿದ್ದ ನದಿ ತೀರದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. - ಮುಂದುವರಿದ ಪ್ರವಾಹ ಸ್ಥಿತಿ:

ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಒಳಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದರೂ, ಕೂಡಾ ಜಲಾಶಯದ ನೀರಿನ ಸಂಗ್ರಹಮಟ್ಟವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಲಾಶಯದಿಂದ ನದಿಗೆ 270180 ಕ್ಯುಸೆಕ್ ನೀರನ್ನು ಹರಿಸುತ್ತಿರುವ ಕಾರಣ ಕೃಷ್ಣಾ ನದಿಯಿಂದ ಇನ್ನು ಪ್ರವಾಹ ಸ್ಥಿತಿ ಹಾಗೆಯೇ ಮುಂದುವರಿದಿದೆ. ನದಿ ತೀರದ ಗ್ರಾಮಗಳ ಜನರು ಜಾಗೃತಿ ವಹಿಸಬೇಕು ಎಂದು ಆಣೆಕಟ್ಟೆ ವಿಭಾಗದ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

33.13 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 23.751 ಟಿಎಂಸಿ ನೀರು ಸಂಗ್ರಹವಿದ್ದು, ಗರಿಷ್ಠ 492.252 ಮೀ. ಜಲಾಶಯದ ನೀರಿನ ಮಟ್ಟ 489.930 ಮೀ. ಇದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ