ಕನ್ನಡಪ್ರಭ ವಾರ್ತೆ ಮೈಸೂರು
ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಬುಧವಾರ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿಯ 119ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ತ್ರಿವಿಧ ದಾಸೋಹಿ ಅಷ್ಟೇ ಅಲ್ಲ; ದಿವ್ಯ ದಾರ್ಶನಿಕರೂ, ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ಮಹಾ ಮಾನವತಾವಾದಿಗಳೂ ಆಗಿದ್ದರು. ನಡೆದಾಡುವ ದೇವರೆಂದೇ ಜನ ಸಾಮಾನ್ಯರಿಂದ ಹಾಗೂ ಭಕ್ತರಿಂದ ಕರೆಸಿಕೊಂಡಿವರು. ಮಕ್ಕಳಲ್ಲೇ ಮಹದೇವನ ಕಂಡ ಸಂತ, ಪರರ ಮಕ್ಕಳಲ್ಲೇ ಪರಮಾತ್ಮನ ದರ್ಶಿಸಿದ ಮಹಂತ, ಲಕ್ಷಾಂತರ ದಮನಿತರ, ದುಃಖಿತರ, ದರಿದ್ರರ, ನಿರ್ಗತಿಕರ, ಅಸಹಾಯಕರ, ಬಡವರ, ಕತ್ತಲಲ್ಲಿದ್ದವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಮೂಲಕ, ಅವರಿಗೆ ಬೆಳಕಿನ ಭವಿಷ್ಯ ಒದಗಿಸಿದ ಕಾಯಕ ಯೋಗಿ, ಬದಲಿಗೆ ಏನನ್ನೂ ಬಯಸದ ನಿಷ್ಕಾಮ ಶಿವಯೋಗಿ, ಇಂಥವರು ಯುಗಕ್ಕೊಬ್ಬರು, ಎಲ್ಲರನ್ನೂ ತನ್ನವರೇ ಎಂದುಕೊಂಡ ಇವರೊಬ್ಬ ಆಧುನಿಕ ಬಸವಣ್ಣ ಎಂದರು.ನರ್ಸರಿಯಿಂದ ಹಿಡಿದು ಇಂಜಿನಿಯರಿಂಗ್ ವರೆಗೆ ಶಿಕ್ಷಣ ಮತ್ತು ತರಬೇತಿಗಾಗಿ 132 ವಿದ್ಯಾ ಸಂಸ್ಥೆ ಸ್ಥಾಪಿಸಿದ ಪವಾಡ ಪುರುಷ, ಇವರಿಗೆ ಭಾರತ ರತ್ನ ಪ್ರಶಸ್ತಿ ಬಂದಿದ್ದರೆ, ಆ ಪ್ರಶಸ್ತಿಯ ಘನತೆ ಗೌರವಗಳು ಹೆಚ್ಚಾಗುತ್ತಿದ್ದವು. ಈಗಲಾದರೂ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಕರ್ಪುರದ ಗಿರಿಯಂತೆ, 111 ವರ್ಷ, ಸುತ್ತಮುತ್ತಲ ಕತ್ತಲೆಗೆ ಬೆಳಕ ನೀಡಲು ತಮ್ಮನ್ನು ತಾವು ಉರಿಸಿಕೊಂಡು, ಶ್ರೀಗಂಧದಂತೆ ಸವೆದ ಈ ಶ್ರೇಷ್ಠ ಸಂತರಿಗೆ ಈಗಲಾದರೂ ಭಾರತರತ್ನ ನೀಡಬೇಕಿದೆ ಎಂದರು.
ಸಾಹಿತ್ಯ ಕ್ಷೇತ್ರದ ಡಾ.ಕೆ. ಲೀಲಾ ಪ್ರಕಾಶ್, ವೈದ್ಯಕೀಯ ಕ್ಷೇತ್ರದ ಎಸ್.ಇ. ಗಿರೀಶ್, ಶಿಕ್ಷಣ ಕ್ಷೇತ್ರದ ಎಂ.ಸಿ. ಮಂಜುಳಾ, ಕಲಾ ಮತ್ತು ಧಾರ್ಮಿಕ ಕ್ಷೇತ್ರದ ಸುಮಾ ರಾವ್, ಸಾರ್ವಜನಿಕ ಸೇವಾಕ್ಷೇತ್ರದ ಗೋಪಾಲ್, ಸಮಾಜ ಸೇವಾಕ್ಷೇತ್ರದ ತನುಜಾ ಮಹೇಶ್, ಟಿ. ಸುರೇಶ್, ಲೋಕೇಶ್ ಹಾಲಹಳ್ಳಿ ಅವರಿಗೆ ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.