ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾವಚಿತ್ರ ಮೆರವಣಿಗೆಗೆ ಚಾಲನೆ
ಕನ್ನಡಪ್ರಭ ವಾರ್ತೆ ಕನಕಗಿರಿಶ್ರೀ ಕೃಷ್ಣ ಪರಮಾತ್ಮನ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಮೈಗೂಡಿಸಿಕೊಂಡು ನಡೆದರೆ ಬದುಕು ಬಂಗಾರವಾಗುತ್ತದೆ ಎಂದು ತಹಶೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ಯಾದವ(ಗೊಲ್ಲ) ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜಕ್ಕೆ ಸ್ಪೂರ್ತಿಯಾಗಿರುವ ಅದೆಷ್ಟೋ ಮಹನೀಯರು ಇಂದು ಜಾತಿಗೆ ಸೀಮಿತವಾಗಿದ್ದಾರೆ. ಯಾವ ಸಮುದಾಯದ ದಾರ್ಶನಿಕರನ್ನು ಜಾತಿಗೆ ಸೀಮಿತ ಗೊಳಿಸಿದರೆ ಅವರ ತತ್ವಗಳು ಜಾತಿ ಸೀಮಿತವಾದಂತೆ. ಅದಕ್ಕಾಗಿ ಎಲ್ಲ ಮಹನೀಯರನ್ನು ಗೌರವಿಸುವುದು ಮತ್ತು ನಡೆದುಕೊಳ್ಳುವುದು ನಮ್ಮ ಕರ್ತವ್ಯವಾದಾಗ ಮಾತ್ರ ಮಹನೀಯರ ವಿಚಾರಗಳು ಹೆಚ್ಚೆಚ್ಚು ಬೆಳಗುತ್ತವೆ ಎಂದು ತಿಳಿಸಿದರು.ನಂತರ ಕರಡೋಣ ಗ್ರಾಪಂ ಅಧ್ಯಕ್ಷ ಹಿರೇ ಹನುಮಂತಪ್ಪ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ದುಶ್ಚಟ ತಾಂಡವ ವಾಡುತ್ತಿದೆ. ಎಲ್ಲ ವರ್ಗದವರು ಚಟ ಮುಕ್ತರಾಗಿ ನಡೆದು ಕೊಳ್ಳುವ ಮೂಲಕ ಶ್ರೀಕೃಷ್ಣನ ತೋರಿದ ಆದರ್ಶಗಳನ್ನು ಅಳವಡಿಸಿಕೊಂಡು ಬದುಕೋಣ ಎಂದರು.
ಇದಕ್ಕೂ ಮೊದಲು ಪಟ್ಟಣದ ರಾಜ ಬೀದಿಯಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಯುವಕರು ಡಿಜೆ ಸೌಂಡ್ಗೆ ಕುಣಿದು ಸಂಭ್ರಮಿಸಿದರು. ಮಹಿಳೆಯರು ಕಳಸ ಹಿಡಿದು ಮೆರವಣಿಗೆಗೆ ಶೋಭೆ ತಂದರು.ಈ ಸಂದರ್ಭದಲ್ಲಿ ದುರ್ಗದಾಸ ಯಾದವ, ಗಂಗಾಧರಸ್ವಾಮಿ, ಹನುಮಂತ ಬಸರಿಗಿಡ, ರವಿ ಭಜಂತ್ರಿ, ರಾಕೇಶ ಕಂಪ್ಲಿ, ಕಂಠಿರಂಗಪ್ಪ ನಾಯಕ, ಮದರಸಾಬ, ಟಿ.ಜೆ. ರಾಮಚಂದ್ರ, ವಾಗೀಶ ಹಿರೇಮಠ, ಕನಕಪ್ಪ ಗುಡದೂರು, ಮಲ್ಲಪ್ಪ ಬಂಡಿ, ಪಾಮಣ್ಣ ಸಲ್ಲರ್, ಸಣ್ಣ ನರಿಯಪ್ಪ, ವೆಂಕಟೇಶ ಬಂಡ್ಲಿ, ನಿರುಪಾದಿ ಗೊಲ್ಲರ, ಕೃಷ್ಣಮೂರ್ತಿ ದಾಸರ, ವೆಂಕಣ್ಣ ಸೂಜಿ ಸೇರಿದಂತೆ ಸಮಾಜದ ಹಿರಿಯರು, ಯುವಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.