ಶ್ರೀ ಕೃಷ್ಣ ಜಯಂತಿ: ರಾಧಾ-ಕೃಷ್ಣ ವೇಷದಲ್ಲಿ ಗಮನ ಸೆಳೆದ ಮಕ್ಕಳು
ಶ್ರೀಕೃಷ್ಣನ ಸಂದೇಶಗಳು ಸದಾಕಾಲ ಮನುಷ್ಯ ಮತ್ತು ಜೀವಪರವಾಗಿವೆ ಎಂದು ಕೊಪ್ಪಳದ ಶಿಕ್ಷಕ ಮಹೇಶ್ ಬಳ್ಳಾರಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸಿರಸಪ್ಪಯ್ಯನ ಮಠದ ಓಣಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದ ಯಾದವ ಸಾಂಸ್ಕೃತಿಕ ಕಲಾ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಶ್ರೀಕೃಷ್ಣ ಏಕಮುಖದ ವ್ಯಕ್ತಿಯಲ್ಲ. ಹಲವು ಕರ್ತೃತ್ವ ಶಕ್ತಿಗಳ ಮಹಾ ಸಾಧಕ. ಅವರು ಓರ್ವ ದಾರ್ಶನಿಕ, ಸಮಾಜ ಸುಧಾರಕ, ಚಿಂತಕ, ನಿರ್ವಾಹಕ, ಜ್ಞಾನಿ, ಸುಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿಯ ಜೊತೆಗೆ ಬಹುದೊಡ್ಡ ರಾಜತಾಂತ್ರಿಕರಾಗಿದ್ದರು. ಅಲ್ಲದೇ ಶ್ರೀಕೃಷ್ಣರು ಸಂಗೀತದ ಬಹುದೊಡ್ಡ ಪ್ರೇಮಿಯಾಗಿದ್ದರು. ಜೀವನದ ಮೌಲ್ಯಗಳು, ಸಮಾಜ ಸುಧಾರಣೆ, ವಿಜ್ಞಾನದ ಸಂಗತಿಗಳು, ಆಧ್ಯಾತ್ಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಶ್ರೀಕೃಷ್ಣ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಅತ್ಯವಶ್ಯಕವಾಗಿವೆ. ಜೀವನದಲ್ಲಿ ಕಷ್ಟ ಮತ್ತು ಸುಖಃಗಳನ್ನು ಸಮನಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಆತ್ಮಗೌರವ ಹೊಂದಬೇಕು. ಪ್ರತಿ ಜೀವಿಯಲ್ಲಿಯೂ ದೇವರು ನೆಲೆಸಿರುತ್ತಾನೆ ಮತ್ತು ಪ್ರತಿಯೊಬ್ಬರನ್ನು ನಾವು ಗೌರವದಿಂದ ಕಾಣಬೇಕು. ಸೇವಾಮನೋಭಾವನೆಯನ್ನು ರೂಡಿಸಿಕೊಳ್ಳಬೇಕೆಂಬುವುದೇ ಶ್ರೀಕೃಷ್ಣರ ಪ್ರಮುಖ ಸಂದೇಶಗಳಾಗಿವೆ ಎಂದರು.
ಸಮಾಜದ ಮುಖಂಡರಾದ ರಮೇಶ್ ನಾಗೇಶನಹಳ್ಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ರಾಧಾ-ಕೃಷ್ಣ ವೇಷದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಾಣೇಶ್ ಪೂಜಾರ, ಹುಲಗಪ್ಪ ವಾಲಿಕಾರ, ಸಂಗಪ್ಪ ಬಾಗಲಿ, ಭೀಮಣ್ಣ ಲೇಬಗೇರಿ, ವೆಂಕಟೇಶ್ ಕಟ್ಟಿಮನಿ, ರಮೇಶ್ ನಾಗೇಶನಹಳ್ಳಿ, ಕಾಮಾಕ್ಷಿ ವಾಲಿಕಾರ, ಹುಲಿಗಮ್ಮ ವಾಲಿಕಾರ ಸೇರಿದಂತೆ ಮತ್ತಿತರರಿದ್ದರು.
ಸಾಹಿತಿ ಸಾವಿತ್ರಿ ಮುಜುಮದಾರ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಶಿಕ್ಷಕ ಸದಾಶಿವ ಪಾಟೀಲ್ ಹಾಗೂ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು.ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣ ಭಾವಚಿತ್ರದ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠದ ಓಣಿಯಿಂದ ಗಡಿಯಾರ ಕಂಬದವರೆಗೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.