ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯದ ಎಲ್ಲಾ ಭಾಗದಲ್ಲಿ ರೈತರು ರಸಗೊಬ್ಬರದ ಕೊರತೆಯನ್ನು ಅನುಭವಿಸುತ್ತಿದ್ದು ನ್ಯಾಯವಾದ ಬೆಲೆಯಲ್ಲಿ ರಸಗೊಬ್ಬರವು ರೈತರಿಗೆ ಪೂರೈಕೆಯಾಗಬೇಕು. ರೈತರ ಕೃಷಿ ಪಂಪ್ ಸೆಟ್ಗೆ 7 ಗಂಟೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಬೆಳೆ ಸಾಲದ ಮೊತ್ತ ದ್ವಿಗುಣಗೊಳಿಸಬೇಕು. ಬಡವರಿಗೆ ಯಾವುದೇ ಜಾಮೀನು ಅಥವಾ ಭದ್ರತೆ ಇಲ್ಲದೆ ಒಂದು ಕುಟುಂಬಕ್ಕೆ 1 ಲಕ್ಷ ರು. ಸಾಲ ನೀಡಬೇಕು. ಕಳೆದ ವರ್ಷದ ಬೆಳೆವಿಮೆ ಹಣ ಕೂಡಲೇ ನೀಡಬೇಕು. ಮುಂದೆ ಬೆಳೆ ವಿಮೆ ಖಾತರಿಗೊಳಿಸಬೇಕು ಎಂದು ಆಗ್ರಹಿಸಿದರು.
ಬೆಳೆ ಹಾನಿಯಾದಾಗ ಕೂಡಲೇ ಬೆಳೆ ವಿಮೆ ನೀಡಬೇಕು. ಚಳ್ಳಕೆರೆ ತಾಲೂಕಿನ 12 ಗ್ರಾಮ ಪಂಚಾಯಿತಿಗಳ ಬೆಳೆ ವಿಮೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಿ, ಈಗ ನಾಲೆ ಕೆಲಸ ಮುಗಿದಿರುವ ರಾಮಜೋಗಿಹಳ್ಳಿ ಗ್ರಾಮದವರೆಗೆ ನಾಲೆಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದರು.ದ್ವಿದಳ ಧಾನ್ಯಗಳು, ಮೆಣಸಿನಕಾಯಿ ಮತ್ತು ಎಣ್ಣೆಕಾಳು ಬೆಳೆಗೆ ಪ್ರೋತಾಹ ಧನ, ಮೆಣಸಿನಕಾಯಿ ರಫ್ತು ನಿಯಮ ಸರಳೀಕರಣ ಹಾಗೂ ರಾಗಿ, ಮೆಕ್ಕೆಜೋಳ, ದ್ವಿದಳ ಧಾನ್ಯ ಖರೀದಿ ಕೇಂದ್ರಗಳನ್ನು ತೆರೆದು ಅಲ್ಲಿ ಭ್ರಷ್ಟಾಚಾರವಿಲ್ಲದಂತೆ ಕೆಲಸ ಮಾಡಬೇಕು. ಸರ್ಕಾರಿ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರವಿಲ್ಲದೆ ಜನರಿಗೆ ಸೇವೆ ದೊರೆಯಬೇಕು. ಸರ್ಕಾರಿ ಸಿಬ್ಬಂದಿಗಳು ಜನಸ್ನೇಹಿಗಳಾಗಿ ನಡೆದುಕೊಳ್ಳಬೇಕು.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ಅಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.ವಿದ್ಯುತ್ ಖಾಸಗೀಕರಣ ಕಾಯ್ದೆ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕೆಆರ್ ಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.