ರಾಣಿಬೆನ್ನೂರು: ಹಾವೇರಿಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ದಿನ ನಡೆಸಲು ಉದ್ದೇಶಿಸಲಾಗಿದ್ದ ಅಹಿಂದ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಪದವೀಧರರು ಹಾಗೂ ಶಿಕ್ಷಕರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ. ಪಶ್ಚಿಮ ಪದವೀಧರ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಕುಬೇರಪ್ಪ ಅವರು ಟಿಕೆಟ್ ನಿರಾಕರಣೆಯಿಂದ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದು ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ದಿನವೇ ಹಾವೇರಿಯಲ್ಲಿ ಅಹಿಂದ ಸಮಾವೇಶ ನಡೆಸಲು ಸಕಲ ಸಿದ್ಧತೆ ಕೈಗೊಂಡಿದ್ದರು. ಈ ವಿಷಯ ಪಕ್ಷದ ಹೈಕಮಾಂಡ್ಗೆ ತಲುಪಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರಾಣಿಬೆನ್ನೂರು ನಗರದಲ್ಲಿನ ಡಾ.ಆರ್.ಎಂ. ಕುಬೇರಪ್ಪ ಮನೆಗೆ ಭೇಟಿ ನೀಡಿ ಈ ವಿಷಯ ಕುರಿತು ಸಮಾಲೋಚನೆ ನಡೆಸಿದರು. ತಮಗೆ ಟಿಕೆಟ್ ಕೈ ತಪ್ಪಿರುವುದರಿಂದ ಅದಕ್ಕೆ ಸಮಾನಾಂತರ ಹುದ್ದೆ ನೀಡಬೇಕು ಮತ್ತು ಮುಂಬರುವ ಚುನಾವಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಬೇಡಿಕೆಯನ್ನು ಪಕ್ಷ ಮತ್ತು ಸರ್ಕಾರ ಖಂಡಿತವಾಗಿ ಪರಿಗಣಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಆನಂದ ಗಡ್ಡದೇವರಮಠ, ಮಹಮ್ಮದ ಸಾಧಿಕ ಮತ್ತಿತರರಿದ್ದರು.