ಕನ್ನಡಪ್ರಭ ವಾರ್ತೆ ಮಂಗಳೂರು
ಕುಡ್ಮಿ ಸಿಗ್ಮೋತ್ಸವ ಸಮಿತಿ ಎಡಪದವು ಇದರ ವತಿಯಿಂದ ಏ.12ರಂದು ಎಡಪದವು ಚಂದು ನಿಕೇತನ ಸಭಾಂಗಣದಲ್ಲಿ ‘ಕುಡ್ಮಿ ಸಿಂಗ್ಮೋತ್ಸವ-2025’ ನಡೆಯಲಿದೆ.ಕುಡುಬಿ ಸಮುದಾಯ ತನ್ನ ಅಸ್ಮಿತೆಯನ್ನು ತನ್ನ ಸಂಸ್ಕಾರ, ಜಾನಪದ ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಮೂಲಕ ಉಳಿಸಿಕೊಂಡು ಬಂದಿದೆ. ತಮ್ಮ ಐಕ್ಯತೆ ಮೂಲಕ ಸಂಸ್ಕೃತಿಯ ಅನಾವರಣಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಮಿತಿ ಗೌರವಾಧ್ಯಕ್ಷ ಜನಾರ್ದನ ಗೌಡ ಮುಚ್ಚೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.12ರಂದು ಸಂಜೆ 5 ಗಂಟೆಗೆ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಏ.13ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, ಬಳಿಕ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನಿಂದ ಸಭಾಂಗಣ ವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ ಎಂದರು.ಬೆಳಗ್ಗೆ 10 ಗಂಟೆಗೆ ಗೋವಾ ಅಸೆಂಬ್ಲಿ ಸ್ಪೀಕರ್ ರಮೇಶ್ ತಾವಡ್ಕರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೋಕನಾಥ್ ಅಧ್ಯಕ್ಷತೆ ವಹಿಸುವರು. ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಾಂಡ್ ಸೋಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೋ ಭಾಗವಹಿಸುವರು. ಬಳಿಕ ಅಂತಾರಾಷ್ಟ್ರೀಯ ಮೃದಂಗ ಕಲಾವಿದ ವಾದ್ಯ ವಿಶಾರದ ಬಾಲಣ್ಣ ಪುಟ್ಟಮ್ಮ ಹರಿಬಾಬು ಇವರಿಂದ ಮೃದಂಗ ವಾದನ ನಡೆಯಲಿದೆ ಎಂದರು. ಸಂಜೆ 5 ಗಂಟೆಗೆ ಮಹಿಳಾ ಸಂಗಮ ನಡೆಯಲಿದ್ದು, ಗೋವಾ ಸರ್ಕಾರದ ಸಂಸ್ಕೃತಿ ಮತ್ತು ಕ್ರೀಡಾ ಸಚಿವ ಗೋವಿಂದ ಗೌಡೆ ಭಾಗವಹಿಸುವರು. ವಕೀಲೆ ವಿದ್ಯಾ ಮಲ್ಯ ದಿಕ್ಸೂಚಿ ಭಾಷಣ ಮಾಡುವರು. ಶಾಸಕ ಡಾ.ಭರತ್ ಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರಿಕ್ ಒಝಾರಿಯೋಗೆ ವಿಶೇಷ ಸನ್ಮಾನ ನಡೆಯಲಿದೆ. ಬಾಲಣ್ಣ ಪುಟ್ಟಣ್ಣ ಹರಿಬಾಬು ಇವರ ಸಹಿತ ವಿವಿಧ ರಂಗದ ಸಾಧಕರಿಗೆ, ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆಎಂದರು.
ಕಾರ್ಯದರ್ಶಿ ಸಂತೋಷ್ ಸಾಗರ್, ಸಂಘಟನಾ ಕಾರ್ಯದರ್ಶಿ ಲಿಂಗಪ್ಪ ಗೌಡ, ಹರೀಶ್, ಮಹಿಳಾ ಸಮಿತಿ ಅಧ್ಯಕ್ಷೆ ನಮಿತಾ ಜನಾರ್ದನ, ಉಪಾಧ್ಯಕ್ಷೆ ಮೀನಾಕ್ಷಿ ಇದ್ದರು.