ಚನ್ನಪಟ್ಟಣ: ದೇವೇಗೌಡರು ಕುಮಾರಸ್ವಾಮಿ ಅವರು ಆಕಾಶ, ಡಿ.ಕೆ.ಶಿವಕುಮಾರ್ ಭೂಮಿ ಎಂದಿದ್ದಾರೆ. ಆಕಾಶ ಆದ್ರೆ ಅವರನ್ನ ಮುಟ್ಟಲು ಆಗುತ್ತಾ, ಅವರು ಜನರ ಕೈಗೆ ಸಿಗ್ತಾರಾ.? ಡಿ.ಕೆ.ಶಿವಕುಮಾರ್ ಭೂಮಿ ಮೇಲೆ ಇದ್ದಾರೆ, ಅದಕ್ಕೆ ಜನರ ಕೈಗೆ ಸಿಗುತ್ತಾರೆ ಜನರ ಸಮಸ್ಯೆ ಕೇಳುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಅವರು ಮುಖ್ಯಮಂತ್ರಿ ಆಗಿ ಐದು ವರ್ಷ ಇದ್ದರಾ? ಪ್ರಧಾನ ಮಂತ್ರಿಯಾಗಿ ಐದು ವರ್ಷ ಅಧಿಕಾರ ಮಾಡಿದ್ರಾ.? ಅವರ ನೇತೃತ್ವದ ಸರ್ಕಾರ ಇದ್ದಾಗಲೇ ಐದು ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ. ಅದಕ್ಕೆ ಈ ಸರ್ಕಾರ ಕಿತ್ತುಹಾಕ್ತೇವೆ ಅಂತಾರೆ. ಅವರು ದೊಡ್ಡವರು, ಅವರ ಬಗ್ಗೆ ಜಾಸ್ತಿ ಮಾತನಾಡೊದು ಬೇಡ ಎಂದು ಟಾಂಗ್ ನೀಡಿದರು.
ನಿದ್ದೆ ಮಾಡಲ್ಲ ಎಂದಿದ್ದರು:ಅವರು ಜೆಡಿಎಸ್ ೧೨೦ ಸೀಟ್ ಗೆಲ್ಲವುವರೆಗೂ ನಿದ್ದೆ ಮಾಡಲ್ಲ ಅಂದಿದ್ರು. ಜೆಡಿಎಸ್ ಬಹುಮತ ಪಡೆದು ಕುಮಾರಸ್ವಾಮಿ ಪ್ರಮಾಣ ವಚನ ನೋಡೊವರೆಗೂ ನಿದ್ದೆ ಮಾಡಲ್ಲ ಅಂದ್ರು. ೧೨೦ ಸೀಟ್ ಬರಲಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ, ನಾನು ರಾಜಕಾರಣದಲ್ಲಿ ಇರಲ್ಲ ಅಂದ್ರು, ಆದ್ರೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
೨೦೧೮, ೨೦೨೩ರಲ್ಲಿ ಕುಮಾರಸ್ವಾಮಿ ಎಷ್ಟು ಸೀಟ್ ಗೆದ್ರು? ಯಾವುದೋ ಕಾರಣಕ್ಕೆ ಸಿಎಂ ಆದರು, ಆದರೆ ಐದು ವರ್ಷ ಅಧಿಕಾರ ಮಾಡಿದ್ರಾ? ಹಾಗಾಗಿ ಅವರು ರಾಜಕೀಯವಾಗಿ ಏನೇನೋ ಮಾತನಾಡ್ತಾರೆ ಎಂದರು.ಎಚ್ಡಿಕೆ ಕೈಗೆ ಸಿಗಲಿಲ್ಲ:
ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣದಲ್ಲಿ ಗೆದ್ದು ಅಭಿವೃದ್ಧಿ ಮಾಡಿಲ್ಲ, ಇಲ್ಲಿನ ಜನರ ಕೈಗೆ ಸಿಗೋದಿಲ್ಲ, ಗೆದ್ದು ಜನ ಸಂಪರ್ಕ ಮಾಡಿಲ್ಲ, ಚುನಾವಣೆಯಲ್ಲಿ ಮಾತ್ರ ಸಿಗ್ತಾರೆ, ವಿಧಾನಸಭೆಯಲ್ಲಿ ಅವರು ಮಾತನಾಡಿದ್ದು ಅವರನ್ನು ಬಿಂಬಿಸುತ್ತೆ. ಆ ರೀತಿಯ ಮಾತು ರಾಜಕಾರಣಿಗಳಿಗೆ ಅವಮರ್ಯಾದೆ ಎಂದು ಟೀಕಿಸಿದರು.ಎಚ್ಡಿಕೆ ಚುನಾವಣೆಯ ಕೊನೆಯಲ್ಲಿ ಬರೋದನ್ನ ಕಲಿತಿದ್ದಾರೆ, ಚುನಾವಣೆಗೆ ಹಣ, ಆಮಿಷ, ಕಣ್ಣೀರು ಕೆಲಸ ಮಾಡಲ್ಲ, ಮಾಡಿರುವ ಕೆಲಸಗಳನ್ನ ಜನ ನೋಡಿದ್ದಾರೆ. ಜನಸಂಪರ್ಕ ಚುನಾವಣೆಯಲ್ಲಿ ಶಕ್ತಿ ತೋರಲಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರಕ್ಕೆ, ಕ್ಷೇತ್ರದ ಜಲ ಸಂಪನ್ಮೂಲಕ್ಕೆ ತಮ್ಮದೇ ಆದ ಕೊಡುಗೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಚನ್ನಪಟ್ಟಣ ಅಭಿವೃದ್ಧಿಗೆ ಶ್ರಮ ವಹಿಸಲಿದ್ದಾರೆ. ಅಭಿವೃದ್ಧಿ ಕಡೆ ಗಮನಕೊಟ್ಟು ಜನ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಯೋಗೇಶ್ವರ್ ಎರಡು ಬಾರಿ ಸೋತಿದ್ದಾರೆ ಎಂಬ ಅನುಕಂಪ ಇದೆ. ಜನರ ನಡುವೆ ಇದ್ದು ಕೆಲಸ ಮಾಡುವ ವ್ಯಕ್ತಿ ಕ್ಷೇತ್ರಕ್ಕೆ ಬೇಕು. ಹಾಗಾಗಿ ಜನ ಬುದ್ಧಿವಂತರಾಗಿ ಓಟ್ ಮಾಡ್ತಾರೆ ಎಂದರು.ಕಾಂಗ್ರೆಸ್ ನುಡಿದಂತೆ ನಡೆದಿದೆ, ನೆಹರು, ಇಂದರಾ ಗಾಂಧಿ, ರಾಜೀವ್ ಗಾಂಧಿ ಕಾಲದಿಂದಲೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಟ್ಟಿದೆ. ನಮ್ಮ ಕೆಲಸ ಮುಂದಿಟ್ಟು ಮತ ಕೇಳುತಿದ್ದೇವೆ. ಜೆಡಿಎಸ್ನಿಂದ ಅಭಿವೃದ್ಧಿಯ ಕೊಡುಗೆ, ಯಾವ ಕೆಲಸನೂ ಮಾಡದೆ ವೈಯಕ್ತಿಕವಾಗಿ ಆರೋಪ ಮಾಡೋದನ್ನ ರೂಡಿಸಿಕೊಂಡಿದ್ದಾರೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕ ರವಿಕುಮಾರ್ ಗೌಡ ಇದ್ದರು.ಪೊಟೋ೯ಸಿಪಿಟಿ೬:
ಚನ್ನಪಟ್ಟಣದಲ್ಲಿ ಕೃಷ ಸಚಿವ ಚಲುವರಾಯಸ್ವಾಮಿ ಯೋಗೇಶ್ವರ್ ಪರ ಚುನಾವಣಾ ಪ್ರಚಾರ ನಡೆಸಿದರು.