ಕುಂಭಮೇಳದಲ್ಲಿ‌ ಸತ್ತವರ ದೇಹ ಕಸ ಹಾಕುವ ತ್ಯಾಜ್ಯ ಪ್ಲಾಸ್ಟಿಕ್ ಚೀಲದಲ್ಲಿ: ಜಯಚಂದ್ರ

KannadaprabhaNewsNetwork | Updated : Feb 20 2025, 01:06 PM IST

ಸಾರಾಂಶ

ಅವರ ಶವಗಳನ್ನು ಊರಿಗೆ ಕಳುಹಿಸಬೇಕು ಅಂತಾ ದೆಹಲಿಯಲ್ಲಿದ್ದ ನಾನು ಪ್ರಯಾಗರಾಜ್ ಗೆ ಹೋಗಿದ್ದೆ. ಆಗ ಬಾಡಿಗಳನ್ನು ಕಸ ಹಾಕುವ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದರು.

 ತುಮಕೂರು : ಕುಂಭಮೇಳದಲ್ಲಿ‌ ಕಾಲ್ತುಳಿತದಿಂದ‌ ಸತ್ತವರ ದೇಹವನ್ನು ಕಸ ಹಾಕುವ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದರೆಂದು ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ ತಿಳಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಿಂದ ಹೋಗಿದ್ದಂತಹ 60 ಜನರಲ್ಲಿ 4 ಜನ ಕಾಲ್ತುಳಿತದಿಂದ ಪ್ರಾಣ ತೆತ್ತಿದ್ದರು.

ಅವರ ಶವಗಳನ್ನು ಊರಿಗೆ ಕಳುಹಿಸಬೇಕು ಅಂತಾ ದೆಹಲಿಯಲ್ಲಿದ್ದ ನಾನು ಪ್ರಯಾಗರಾಜ್ ಗೆ ಹೋಗಿದ್ದೆ. ಆಗ ಬಾಡಿಗಳನ್ನು ಕಸ ಹಾಕುವ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದರು. ಅದನ್ನು ಶಾಸ್ತ್ರೋಕ್ತವಾಗಿ ಬೆಳಗಾವಿಯ ಅವರ ಸಂಬಂಧಿಕರಿಗೆ ತಲುಪಿಸುವ ಕೆಲಸ ಮಾಡಿದ್ವಿ ಎಂದರು.

ಇಂತಹ ಪ್ರಯಾಗರಾಜ್ ನಲ್ಲಿ ಕುಂಭಮೇಳ‌ ಮಾಡಬೇಕು ಅಂದರೆ ಲಾ ಅಂಡ್ ಆರ್ಡರ್ ನಿರ್ವಹಣೆ ಆಯಾ ರಾಜ್ಯಕ್ಕೆ ಸೇರಿದ್ದು. ಕಾಲ್ತುಳಿತಕ್ಕೆ ಅಲ್ಲಿನ ಸರ್ಕಾರ ಹೊಣೆ ಹೊರಬೇಕು. ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗುತ್ತದೆ ಅನ್ನೋ ಭಾವನೆ ಇರುತ್ತದೆ. ಅದು ಅವರವರ ನಂಬಿಕೆ. ನಂಬಿಕೆಯ ವಿರುದ್ಧ ನಾವು ಮಾತಾಡುವುದಕ್ಕೆ ಬರುವುದಿಲ್ಲ. ಆದರೆ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರಗಳು ಹೊರಬೇಕು ಎಂದರು.

ಲಾ ಅಂಡ್ ಆರ್ಡರ್ ಫೆಲ್ಯೂರ್ ಆಗಿರುವು ಎದ್ದು ಕಾಣುತ್ತಿದೆ. ಅಲ್ಲಿ ಬ್ಯಾಕ್ಟೀರಿಯಾ ಕಂಟಾಮೇಷನ್ ಆಗಿದ್ದು ಆ ನೀರು ಸ್ನಾನ ಮಾಡಲು ಯೋಗ್ಯವಲ್ಲ ಅನ್ನೋ ಮಾತು ಬಂದಿದೆ. ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಿಂದ ನೂರಾರು ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇದ್ದು ಮುಚ್ಚಿಡುವ ತಂತ್ರ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ನಾಯಕರ ದೆಹಲಿ ಪಾಲಿಟಿಕ್ಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅವರವರ ಇಷ್ಟದಂತೆ ದೆಹಲಿಯಲ್ಲಿ ರಾಜಕಾರಣ ನಡೀತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರು ಇಂಗ್ಲಿಷ್‌ನಲ್ಲಿ ಪುಲ್ ಸ್ಟಾಪ್ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅಂದರೆ ಬಾಯಿ ಮುಚ್ಚಿಕೊಂಡು ಇರಿ ಅಂತ ಎಂದರು.

ಆದರೂ ಮಾತಾಡುತ್ತಿರುವುದು ಮತ ಕೊಟ್ಟಂತಹ ಮತದಾರರಿಗೆ ದಿಗ್ಭ್ರಮೆ ಉಂಟು ಮಾಡಿದೆ. ಎಲ್ಲವನ್ನೂ ಎಐಸಿಸಿ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತಾಡುವುದಿಲ್ಲ ಎಂದರು.

ದಲಿತ ಸಿಎಂ ವಿಚಾರ ಸೇರಿದಂತೆ ಪಕ್ಷದ ಎಲ್ಲಾ ನಿರ್ಧಾರ ಮಾಡುವಂತಹದ್ದು ಮಲ್ಲಿಕಾರ್ಜುನ ಖರ್ಗೆ ಅವರು. ಅವರವರ ಅಭಿಪ್ರಾಯವನ್ನು ಎಐಸಿಸಿ ಅಧ್ಯಕ್ಷರ ಬಳಿ ವೈಯಕ್ತಿಕವಾಗಿ ಹೇಳಿಕೊಳ್ಳಲು ಅಭ್ಯಂತರ ಇಲ್ಲ. ಬಹಿರಂಗ ಹೇಳಿಕೆ ಸರಿಯಲ್ಲ ಎಂದರು.

Share this article