ಸುಜ್ಞಾನ-ಸಂಗಮ ಕಾರ್ಯಕ್ರಮದಲ್ಲಿ ಕನಕಗುರು ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಕುಂಚಿಟಗ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಸುಜ್ಞಾನ-ಸಂಗಮ, ಸರ್ವ ಸಮಾಜದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಂತವೀರ ಶ್ರೀಗಳು ಶೂನ್ಯದಿಂದ ಶ್ರೀಮಠವನ್ನು ಕಟ್ಟಿ ಆರ್ಥಿಕ ಸಬಲೀಕರಣ ಮಾಡಿ ತನ್ನ ಜೊತೆ ಇರುವ ಇತರೆ ಸಮುದಾಯಗಳ ಏಳಿಗೆಗೆ ಕಳೆದ 15 ವರ್ಷಗಳಿಂದ ಸರ್ಕಾರಗಳಿಂದ ಅನುದಾನ, ಜಮೀನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಹಿಂದುಳಿದ ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದ್ದಾರೆ.ಕಳೆದ 15 ವರ್ಷಗಳಲ್ಲಿ 350 ಕೋಟಿ ರು.ಗೂ ಹೆಚ್ಚು ಹಣವನ್ನು ವಿವಿಧ ಮಠಗಳಿಗೆ ಕೊಡಿಸುವಲ್ಲಿ ಹಾಗೂ ಬೆಂಗಳೂರು ನಗರದಲ್ಲಿ 800 ಕೋಟಿ ಬೆಲೆಬಾಳುವ 53 ಎಕರೆ ಜಮೀನನ್ನು ಶೋಷಿತ ಸಮುದಾಯಗಳಿಗೆ ಕೊಡಿಸುವ ತಮ್ಮ ಕಾರ್ಯಕ್ಷಮತೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಾಣೇಹಳ್ಳಿಯ ಪಂಡಿತರಾಧ್ಯ ಸ್ವಾಮೀಜಿ ಮಾತನಾಡಿ, ಶಾಂತವೀರ ಶ್ರೀಗಳು ಕಳೆದ 29 ವರ್ಷಗಳಿಂದ ಕುಂಚಿಟಿಗ ಸಮಾಜದ ಸಂಘಟನೆ ಮತ್ತು ಮಠದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ತಾವೊಬ್ಬರೇ ಬೆಳೆಯಬೇಕೆಂಬ ಸ್ವಾರ್ಥ ಮನೋಭಾವ ಅವರಲ್ಲಿ ಕಾಣುವುದಿಲ್ಲ. ತಮ್ಮೊಟ್ಟಿಗೆ ಇತರೆ ಸಮುದಾಯದ ಮಠಗಳು ಮತ್ತು ಮಠಾಧೀಶರ ಅಭಿವೃದ್ಧಿಯನ್ನು ಬಯಸುವ ಮಠಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದ್ದರು. ಮುಸ್ಲಿಂ ಸಮಾಜದ ಅಧ್ಯಕ್ಷ ಮುನ್ನ ಮಾತನಾಡಿದರು. ಸಮಾರಂಭದಲ್ಲಿ ಜೈನ, ಮುಸ್ಲಿಂ, ಬ್ರಾಹ್ಮಣ, ವೈಶ್ಯ, ರೆಡ್ಡಿ, ಕಮ್ಮ, ಹಡಪದ, ಕುರುಬ, ನೂಳಂಬ ವೀರಶೈವ, ಸಾಧು ವೀರಶೈವ, ಗಮ ಸಮಾಜ, ಮಡಿವಾಳ, ಆರ್ಯವೈಶ್ಯ, ಕುಂಬಾರ, ಮಾದರ, ಭೋವಿ, ಚಲವಾದಿ, ಕೊರಚ ಕೊರಮ ಸರ್ವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಮುಖಂಡರಾದ ಲಿಂಗಮೂರ್ತಿ, ಹನುಮಂತಗೌಡ, ಕಲ್ಲೇಶಪ್ಪ, ದ್ಯಾಮಣ್ಣ, ತಮ್ಮಣ್ಣ, ತಣಿಗೇಕಲ್ಲು ಲೋಕಣ್ಣ, ಕೋಡಿಹಳ್ಳಿ ದರಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಎಸ್.ಕೆ.ಮಂಜು, ಬುಕ್ಕಸಾಗರ ರವಿ, ದೊಡ್ಡಘಟ್ಟದ ಮಹಾಂತೇಶ್, ಮಹೇಶ್ ಸಂಗಮ ಸೇರಿದಂತೆ ಸಂಗಮೇಶ್ವರ ಯುವ ವೇದಿಕೆ, ಸಂಗಮೇಶ್ವರ ಮಹಿಳಾ ಸಂಘ, ಸಂಗಮೇಶ್ವರ ನೌಕರರ ಸಂಘ ಹಾಗೂ ಕುಂಚಿಟಿಗ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.