ಕಂಪ್ಲಿ: ಪಟ್ಟಣದ 4ನೇ ವಾರ್ಡ್ ಶಾಲೆ ಸಮೀಪದ ಅಂಬೇಡ್ಕರ್ ಭವನದಲ್ಲಿ ತಾಲೂಕು ಪೇಂಟರ್ಸ್ ಕಾರ್ಮಿಕರ ಸಂಘ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ಶ್ರಮಿಕ ಶಕ್ತಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕಾರ್ಮಿಕರ ದಿನ ಆಚರಿಸಲಾಯಿತು.
ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕ ಸ್ನೇಹಿ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಅಸಂಘಟಿತ ಕಾರ್ಮಿಕರ ಬದುಕು ಇನ್ನೂ ಸಂಕಷ್ಟಕರವಾಗಿದ್ದು, ಆರೋಗ್ಯ ವಿಮೆ, ನಿವೃತ್ತಿ ವೇತನ, ಮಕ್ಕಳ ಶಿಕ್ಷಣ ಹಾಗೂ ವಸತಿ ಸೌಲಭ್ಯಗಳನ್ನು ವ್ಯಾಪಕವಾಗಿ ಕಲ್ಪಿಸಬೇಕಾಗಿದೆ ಎಂದರು.
ತಾಲೂಕು ಪೇಂಟರ್ಸ್ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮಾನಪ್ಪ ಪೇಂಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಪೇಂಟರ್ಸ್ ಹಾಗೂ ಇತರ ಕಾರ್ಮಿಕ ಕುಟುಂಬಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಅವರಿಗೆ ನಿವೇಶನ, ಮನೆ ನಿರ್ಮಾಣ ಸೌಲಭ್ಯ, ಸಮುದಾಯ ಭವನ, ಆರೋಗ್ಯ ಸೇವೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಕಾರ್ಮಿಕರು ದುಡಿಯುವ ಶಕ್ತಿಯಷ್ಟೇ ಅಲ್ಲ, ಸಮಾಜದ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಅವರ ಶ್ರಮಕ್ಕೆ ತಕ್ಕ ಮಾನ್ಯತೆ ಹಾಗೂ ಭದ್ರತೆ ದೊರಕುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಚನ್ನಮ್ಮ ಹಾಗೂ ಚನ್ನಮಲ್ಲಮ್ಮ, ತಾಲೂಕು ಪೇಂಟರ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಮಾರುತಿ ಪೇಂಟರ್, ಪದಾಧಿಕಾರಿ ರಾಮಕೃಷ್ಣ ಚಿತ್ರಗಾರ, ಹಮಾಲರ ಸಂಘದ ತಾಲೂಕು ಅಧ್ಯಕ್ಷ ಮೊಹಿದ್ದೀನ್, ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ, ಈ. ಧನಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.