ಅರಕಲಗೂಡು ತಾಲೂಕಿನ ಅರಸಿಕಟ್ಟೆ ಅಮ್ಮನವರ ದೇವಾಲಯ ನಿರ್ವಹಣೆಯಲ್ಲಿ ಸಮಿತಿಯಿಂದ ಅಕ್ರಮ ನಡೆಸಲಾಗಿದೆ. ಕೆರೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಶಾಸಕ ಎ.ಮಂಜು ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇವಾಲಯ ನಿರ್ವಹಣೆ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಅರಕಲಗೂಡು ತಾಲೂಕಿನ ಅರಸಿಕಟ್ಟೆ ಅಮ್ಮನವರ ದೇವಾಲಯ ನಿರ್ವಹಣೆಯಲ್ಲಿ ಸಮಿತಿಯಿಂದ ಅಕ್ರಮ ನಡೆಸಲಾಗಿದೆ. ಕೆರೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಶಾಸಕ ಎ.ಮಂಜು ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇವಾಲಯ ನಿರ್ವಹಣೆ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅರಸಿಕಟ್ಟೆ ಅಮ್ಮ ದೇವಾಲಯದ ಸಮಿತಿ ವಿರುದ್ಧ ಕೆಲವರು ಕಾನೂನು ಬಾಹಿರ ಸಮಿತಿ ರಚನೆ, ಕೆರೆ ಒತ್ತುವರಿ, ಕಂದಾಯ ಇಲಾಖೆಯ ಉಸ್ತುವಾರಿಯಲ್ಲಿ ೭೦ ಲಕ್ಷ ಅವ್ಯವಹಾರ ಹೀಗೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಆದರೆ, ಇದೆಲ್ಲಾ ರಾಜಕೀಯ ಪಿತೂರಿ ಎಂದರು. ಸಮಿತಿ ವಿರುದ್ಧ ಬಂದಿರುವ ಆರೋಪದ ಬಗ್ಗೆ ಬಂದಿರುವ ದೂರಿನ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ಮಾಡಿ ಸತ್ಯಾ ಸತ್ಯತೆ ಬಗ್ಗೆ ತಿಳಿದುಕೊಳ್ಳುವ ಬದಲಾಗಿ ಯಾರೋ ರಾಜಕಾರಿಣಿಗಳ ಒತ್ತಡಕ್ಕೆ ಮಣಿದು ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು. ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಅಡುಗೆ ಹಾಗೂ ಊಟದ ಕೋಣೆ ನಿರ್ಮಾಣ, ಕರೆ ದುರಸ್ತಿ, ಪ್ರಾಣಿಗಳ ವದೆಗೆ ಪ್ರತ್ಯೇಕ ಸ್ಥಾನ ನೀಡಿ ಅಭಿವೃದ್ಧಿ ಮಾಡಲಾಗಿದೆ. ಜೊತೆಗೆ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುವಂತೆ ಕೆಲಸ ಮಾಡಲಾಗಿದೆ. ಇದಲ್ಲದೆ ಕಾಣಿಕೆ ಹುಂಡಿ ತುಂಬಿದಾಗ ಸಮಿತಿ ಸದಸ್ಯರ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಿ ಸಮಗ್ರ ಲೆಕ್ಕ ಪತ್ರ ಇಡಲಾಗಿದೆ. ಪ್ರತೀ ವಾರಕ್ಕೊಮ್ಮೆ ಸೇವಾ ಶುಲ್ಕ, ಮಳಿಗೆಗಳ ಆದಾಯ, ಜೊತೆಗೆ ಭಕ್ತರ ಕಾಣಿಕೆ ಹಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಲೆಕ್ಕ ಹಾಗೂ ದೇವಾಲಯಕ್ಕೆ ಬರುವ ಬೆಲೆ ಬಾಳುವ ವಸ್ತುಗಳಿಂದ ೮ ಲಕ್ಷ ನಗದು ಜೊತೆಗೆ ೫೦ ಸಾವಿರ ಕಾಣಿಕೆ ಹಣವನ್ನು ಬ್ಯಾಂಕ್ ಗೆ ಜಮೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಎಲ್ಲಾ ರೀತಿಯ ಕೆಸವನ್ನ ಮಾಡಿದ್ದರು ನಮ್ಮ ವಿರುದ್ದ ದ್ವೇಷದ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ದೇವಾಲಯದ ಆವರಣದಲ್ಲಿ ಭಕ್ತರಿಗೆ ಅನುಕೂಲ ಆಗುವ ಕೆಲಸಗಳನ್ನು ಮಾಡಲು ಮುಂದಾದರೆ ಅವುಗಳಿಗೆ ರಾಜಕೀಯ ದ್ವೇಷದಿಂದ ಅಧಿಕಾರಿಗಳನ್ನು ಮುಂದೆ ಇಟ್ಟುಕೊಂಡು ಅಡ್ಡಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.