ದೈವೀ ಕೃಪೆಯ ಮಹಿಮೆ ಸಾರಿದ ‘ನೃತ್ಯಸಮರ್ಪಣಂ’

KannadaprabhaNewsNetwork | Published : Dec 15, 2023 1:31 AM

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ನೃತ್ಯ ಕಾರ್ಯಕ್ರಮ, ದೈವಿ ಕೃಪೆಯ ಮಹಿಮೆ ಸಾರಿದ ನೃತ್ಯಸಮರ್ಪಣಂ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶಿವ ಮತ್ತು ಮನ್ಮಥ, ಶಿವ ಮತ್ತು ಮಾರ್ಕಂಡೇಯನ ಕಥನ ಮತ್ತು ಕೃಷ್ಣ ಲೀಲೆಯ ವಿವಿಧ ನಾಟ್ಯ ರೂಪಕಗಳನ್ನು ನಿರೂಪಿಸುವಲ್ಲಿ ದೃಷ್ಟಿ ನೃತ್ಯ ಮೇಳದ ಬೆಂಗಳೂರು ತಂಡ ಯಶಸ್ವಿಯಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಸೋಮವಾರ ಅಮೃತವರ್ಷಿಣಿ ಸಭಾಭವನದ ವೇದಿಕೆಯಲ್ಲಿ ವಿದುಷಿ ಅನುರಾಧ ವಿಕ್ರಾಂತ್ ಇವರ ತಂಡ ನಡೆಸಿಕೊಟ್ಟ ‘ನೃತ್ಯಸಮರ್ಪಣಂ’ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ರಾಗನಾಟ ಮತ್ತು ಆದಿತಾಳದಲ್ಲಿ ಗಣಪತಿಯ ವರ್ಣನೆಯನ್ನು ವಿವಿಧ ರೀತಿಯ ಭಂಗಿಗಳನ್ನು ಭರತನಾಟ್ಯದಲ್ಲಿ ಗಣಪತಿಗೆ ವಂದಿಸುವ ಮುಖಾಂತರ ಕಾರ್ಯಕ್ರಮವು ವಿಘ್ನವಿನಾಶಕನ ನೆನೆಯುವುದರ ಮೂಲಕ ಆರಂಭವಾಯಿತು.

ಇದರ ರಚನೆ ಆಧಾರವನ್ನು ಶತಾವಧಾನಿ ಡಾ ಆರ್ ಗಣೇಶ್ ರಚಿಸಿದ್ದು, ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ ಮತ್ತು ವಿದ್ವಾನ್ ಗುರುಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ನೃತ್ಯ ಸಂಯೋಜನೆಯನ್ನು ಅನುರಾಧ ವಿಕ್ರಾಂತ್ ಮಾಡಿದ್ದಾರೆ. ಈ ಕೃತಿಯು ಆದಿತಾಳ ಮತ್ತು ರಾಗಮಾಲಿಕೆಯಲ್ಲಿದೆ. ಶುಭಾ ಚೇತನ್, ಐಶ್ವರ್ಯ ಟೋಲ್ಪಡೆ, ಚಂದ್ರಲೇಖ, ಕಾವ್ಯಶ್ರೀ ಭಾರದ್ವಾಜ್, ರಿಯಾ ವಿಕ್ರಾಂತ್ ಹೀಗೆ ಒಟ್ಟು ಏಳು ಕಲಾವಿದರು ಶಿವಪಾದವನ್ನು ಪ್ರದರ್ಶಿಸಿದರು.

ಎರಡನೆಯದಾಗಿ ರಾಷ್ಟ್ರಕವಿ ಕುವೆಂಪುರವರ ಪದ್ಯದಲ್ಲಿ ಗೌರಿ ಎಸ್, ಲಾಲಿತ್ಯ ಎ, ದರ್ಶಿನಿ ವಿ. ವರ್ಷಾ ಶಂಕರ್, ವೈಷ್ಣವಿ ಕುಮಾರ್ , ರಂಜನಾ ಪದ್ಮನಾಭಿ ಅದಿತಿ, ಶ್ವೇತಾ ಆರ್. ನೃತ್ಯವನ್ನು ಪ್ರದರ್ಶಿಸಿದರು.

ಪ್ರವೀಣ್ ಡಿ ರಾವ್ ಅವರ ಸಂಗೀತ ಸಂಯೋಜನೆಯಲ್ಲಿ ತೃಷ್ಣ ಹೊಸವಳ್ಳಿ, ಆರ್ ನಿರ್ಮಲಾ, ರಿಯಾ ವಿಕ್ರಾಂತ್, ನಿಹಾರಿಕಾ, ಅಥಿರಾ ಏಕನಾಥ್ , ಸಿರಿ, ಶೋನಿಮಾ ಹೀಗೆ ಹತ್ತು ಕಲಾವಿದರು ನೃತ್ಯ ಮಾಡಿದರು.

ಎರಡನೆಯದಾಗಿ ಕರ್ನಾಟಕದ ಹೆಸರಾಂತ ಸಾಹಿತಿ ಡಿ.ವಿ ಗುಂಡಪ್ಪನವರ ಲೋಕಮಾನ್ಯ ನಾಟಕವಾದ ಶ್ರೀ ಕೃಷ್ಣ ಪರೀಕ್ಷಣಂ ಎಂಬ ನೃತ್ಯ ನಾಟಕವನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣನ ಲೀಲೆಯ ಜೊತೆ ಸರ್ವಂ ಕೃಷ್ಣ ಮಯಂ ಎಂಬ ಮಹತ್ವವಾದ ಜೀವನದ ತತ್ವವನ್ನು ಸಾರುವ ಗೋಪ ಗೋಪಿಕೆಯರಿಗೆ ತಮಾಷೆಯ ಪ್ರಸಂಗವನ್ನು ಹಣೆಯುತ್ತಾ ಸಮಾಜಕ್ಕೆ ವಿವರಿಸುತ್ತಾನೆ. ಮಾರ್ಗದರ್ಶನವನ್ನು ಶತವಧಾನಿ ಡಾ. ಆರ್. ಗಣೇಶ್ ನೀಡಿದ್ದಾರೆ. ವಿದ್ವಾನ್ ಡಿ.ಎಸ್ ಶ್ರೀವತ್ಸ ಸಂಗೀತ ಸಂಯೋಜನೆ ಮತ್ತು ಅನುರಾಧ ವಿಕ್ರಾಂತ್ ಮತ್ತು ಶಮಾ ಗ್ರೀಷ್ಮಾ ನೃತ್ಯ ಸಂಯೋಜನೆಯನ್ನು ಮಾಡಿದರು. ಡಾ. ಶ್ರೀಧರ್ ಭಟ್ ಸ್ವಾಗತಿಸಿದರು.