ಪರಶುರಾಂಪುರದಲ್ಲಿ ಲಕ್ಷ್ಮಿ ಕೊಲ್ಲಾಪುರದಮ್ಮ ಜಾತ್ರೆ

KannadaprabhaNewsNetwork |  
Published : Apr 08, 2024, 01:07 AM IST
ಶ್ರೀಲಕ್ಷ್ಮಿ ಕೊಲ್ಲಾಪುರದಮ್ಮ ದೇವಿ  | Kannada Prabha

ಸಾರಾಂಶ

ಶ್ರೀದೇವಿಯ 12 ಕೈವಾಡದವರು ಮಂಗಳವಾದ್ಯಗಳ ಮೂಲಕ ಸಮೀಪದ ವೇದಾವತಿ ನದಿಗೆ ತೆರಳಿ ಗಂಗಾ ಪೂಜೆ ಸಲ್ಲಿಸುವರು.

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಏಪ್ರಿಲ್ 9ರಿಂದ ಗ್ರಾಮದಲ್ಲಿ ಜರುಗಲಿರುವ ಶ್ರೀ ಲಕ್ಷ್ಮಿ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.

ಗ್ರಾಮದ ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. ಆರು ದಿನಗಳ ಈ ಉತ್ಸವ ಅಂಗವಾಗಿ ಗ್ರಾಮವು ಉತ್ಸವ ಮೆರವಣಿಗೆ, ಜಾತ್ರೆ, ನಾಡು -ನುಡಿ, ನೆಲ-ಜಲ ಕುರಿತು ಹತ್ತಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ಮುಖ್ಯ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿವೆ. ಗ್ರಾಮಸ್ಥರು ಹಬ್ಬದ ಮೊದಲ ದಿನ ಕುಲದೇವತೆಗಳ ಮತ್ತು ಹಿರಿಯರ ದರ್ಶನ, ಪೂಜೆ ಪುರಸ್ಕಾರ ಮಾಡಲಿದ್ದಾರೆ.

ಏ.10ರಂದು ಚೌಡೇಶ್ವರಿ ಮತ್ತು ಶ್ರೀ ಚನ್ನಕೇಶವ ಸ್ವಾಮಿ ದೇವರ ಉತ್ಸವ ದೇವರುಗಳಿಗೆ ಗುಗ್ಗರಿ ಮತ್ತು ಪಾನಕ ಸೇವೆ ನೆರವೇರಿಸಲಾಗಿದೆ. ಕಲ್ಯಾಣ ರಸ್ತೆಯ ಮುಖ್ಯ ವೃತ್ತದಲ್ಲಿ ಶ್ರೀದೇವಿಯ 12 ಕೈವಾಡದವರು ಮಂಗಳವಾದ್ಯಗಳ ಮೂಲಕ ಸಮೀಪದ ವೇದಾವತಿ ನದಿಗೆ ತೆರಳಿ ಗಂಗಾ ಪೂಜೆ ಸಲ್ಲಿಸುವರು.

ಬಳಿಕ ಸಂಜೆ ವೇದಾವತಿ ನದಿಯಿಂದ ಅಲಂಕೃತ ದೇವಿಯ ಮೂರ್ತಿಯನ್ನು ಗ್ರಾಮದ ಮಧ್ಯಭಾಗದಲ್ಲಿ ಇರುವ ಶಾಲ್ಮಲಿ ವೃಕ್ಷದ ಕೆಳಗೆ ಇರುವ ಕಟ್ಟೆಯ ಮೇಲೆ ಕರೆತಂದು ಪ್ರತಿಷ್ಠಾಪಿಸಲಾಗುವುದು. ಸಂಪ್ರದಾಯದಂತೆ ಗ್ರಾಮದ ಗೌಡ, ಕೊಂಚಗಾರ, ಪಾಳೇಗಾರ ವಂಶಸ್ಥರು ಸೇರಿದಂತೆ ಎಲ್ಲಾ ಗ್ರಾಮ ದೇವಿಗೆ ಮಡ್ಲಕ್ಕಿ, ಬಳೆ, ಸೀರೆ ಉಪಚಾರ, ಆರಿಶಿಣ, ಕುಂಕುಮ, ಹೂವಿನ ಹಾರ ಒಪ್ಪಿಸಿ ತಾಯಿಯ ಮಡಿಲ ತುಂಬಿಸುವರು. ಬಳಿಕ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಕೊಂಡಯ್ಯಲಾಗುವುದು.

ಕಾಳಮ್ಮನ ಗುಡಿಯ ಬಳಿ ಕಂಬಾರ ಸಮುದಾಯದವರು ನೀಡುವ ಬಾಳೆಹಣ್ಣು ಕಾಯಿಯಿಂದ ತಯಾರಿಸಲ್ಪಟ್ಟ ಖಾದ್ಯವನ್ನು ಮಣೆವು ಹಾಕುವರು. ತದನಂತರ ಈಡಿಗ ಸಮುದಾಯದವರಿಂದ ನೀಡುವ ಹೆಂಡದ ಸೇವೆ ಸ್ವೀಕರಿಸಲಾಗುವುದು. ಈ ಸಂದರ್ಭದಲ್ಲಿ ದೇವಿಯನ್ನು ನೋಡಲು ಸಹಸ್ರಾರು ಭಕ್ತರು ಕಾತುರದಿಂದ ಕಾಯುವರು. ದೇವಿ ಉತ್ಸವ ಮೂರ್ತಿಯನ್ನು ಊರ ಹೆಬ್ಬಾಗಿಲ ಬಳಿ ಇರುವ ಚಳಿ ಜ್ವರದಮ್ಮನ ಗುಡಿಯ ಕಟ್ಟೆಯ ಮೇಲೆ ಮತ್ತೆ ಪ್ರತಿಷ್ಠಾಪಿಸಲಾಗುವುದು. ಸಮಸ್ತ ಭಕ್ತರು ಪೂಜೆ ಸ್ವೀಕರಿಸಿ ಗುಗ್ಗರಿ ಪಾನಕ ಬಂಡಿಗಳಿಂದ ದೇಗುಲ ಪ್ರದಕ್ಷಣೆ ನಡೆಸಲಾಗುವುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...