ಬಿಟ್ಚಿ ಯೋಜನೆಗಳಿಗೆ ಮರುಳಾಗಿ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ: ಪುನೀತ್ ಕೆರೆಹಳ್ಳಿ

KannadaprabhaNewsNetwork | Published : Nov 2, 2024 1:24 AM

ಸಾರಾಂಶ

ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ನೃತ್ಯ ಸ್ಪರ್ಧೆ, ಗೋಪೂಜೆ, ಕುಣಿತ ಭಜನೆ, ತುಳು ನಾಟಕ ನಡೆದವು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಸರಕಾರದ ಬಿಟ್ಟಿ ಯೋಜನೆಗಳಿಗೆ ಮರುಳಾಗಿ ಈಗ ಜಮೀನುಗಳನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ನಾವೆಲ್ಲರೂ ಜಾಗೃತಿ ಮೂಡಿಸಿಕೊಂಡು, ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಅವರು ದೀಪಾವಳಿ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದ ದೋಸೆ ಹಬ್ಬದಲ್ಲಿ ಮಾತನಾಡಿದರು. ಉಳುವವನೇ ಭೂಮಿಯ ಒಡೆಯ ಎಂದು ದೇವರಾಜ ಅರಸರು ಕಾನೂನನ್ನು ತಂದರೆ, ಸಿದ್ದರಾಮಯ್ಯ ಅವರು ಅದೇ ಭೂಮಿಗಳನ್ನು ಹಿಂಪಡೆಯುವ ಕೆಲಸ ಮಾಡಿ ಕಾನೂನಿಗೆ ಅಗೌರವ ತೋರಿಸುತ್ತಿದ್ದಾರೆ. ಅಲ್ಲಾನ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಗಳನ್ನು ಮತ್ತೆ ಮರಳಿ ಪಡೆಯಲಿದ್ದೇವೆ ಅದಕ್ಕಾಗಿ ಎದೆಯುಬ್ಬಿಸಿ ಹೋರಾಟ ಮಾಡುತ್ತೇವೆ ಎಂದರು.

ತುಳುನಾಡಿನಲ್ಲಿ ಪ್ರತಿ ಮನೆಯಲ್ಲಿ ಗೋರಕ್ಷಕರು ಇರುವುದು ಸಂತಸದ ಸಂಗತಿ. ಇಲ್ಲಿನ ಪರಂಪರೆಯನ್ನು ಯುವ ಮೋರ್ಚಾ ಮುಂದುವರಿಸುತ್ತಿರುವುದು ಮಹತ್ತರವಾದ ವಿಚಾರವಾಗಿದೆ. ಇಲ್ಲಿನಂತೆ ಬಯಲುಸೀಮೆಯಲ್ಲಿ ಶಕ್ತಿಯುತ ಹಿಂದುತ್ವದ ನಾಯಕರು, ಗಟ್ಟಿ ಕಾರ್ಯಕರ್ತರು ಇಲ್ಲದಿರುವುದು ವಿಷಾದದ ಸಂಗತಿ ಎಂದರು. ಕಾಂಗ್ರೆಸ್‌ ಸರಕಾರ ತನ್ನ ಮೇಲೆ ಗೂಂಡಾ ಕಾಯ್ದೆ ಹಾಕಿದಾಗ ನನಗೆ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಿದವರು ಶಾಸಕ ಪೂಂಜ ಅವರು. ನಾನು ಒಬ್ಬಂಟಿಯಲ್ಲ. ಕುಟುಂಬವನ್ನು ತೊರೆದು ಬಂದ ತನಗೆ ತುಳುನಾಡಿನ ಕಾರ್ಯಕರ್ತರು ಭರವಸೆಯಾಗಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುತ್ವದ ರಾಜಕಾರಣ ಮಾಡದಿದ್ದರೆ ಮುಂದೊಂದು ದಿನ ನಾವೆಲ್ಲ ಸುನ್ನತ್ ಮಾಡಿಸಿಕೊಳ್ಳುವ ಕಾಲ ಬರಬಹುದು ಎಂದು ಎಚ್ಚರಿಸಿ, ಹಿಂದುತ್ವ ಇದ್ದರೆ ಮಾತ್ರ ಭಾರತ ಭಾರತವಾಗಿಯೇ ಇರಲು ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್, ಬಿರ್ವೆರ್ ಕುಡ್ಲದ ಉದಯ, ವಕೀಲೆ ಸಹನಾ ಕುಂದರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್, ಮಂಡಲಾಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ಜಿಲ್ಲಾ ಮಾಧ್ಯಮ ಪ್ರಕೋಷ್ಟ ಸಂಚಾಲಕ ವಸಂತ, ಸೀತಾರಾಮ ಬೆಳಾಲು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಇದ್ದರು.

ಯುವ ಮೋರ್ಚಾ ತಾಲೂಕಾಧ್ಯಕ್ಷ ಶಶಿರಾಜ್ ಶೆಟ್ಟಿ ಸ್ವಾಗತಿಸಿದರು. ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ನೃತ್ಯ ಸ್ಪರ್ಧೆ, ಗೋಪೂಜೆ, ಕುಣಿತ ಭಜನೆ ತುಳು ನಾಟಕ ನಡೆದವು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.

Share this article