ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರೀಕರಣ ಹಾಗೂ ಔದ್ಯಮೀಕರಣದ ಪರಿಣಾಮ ಅರಣ್ಯ ಪ್ರದೇಶದ ಒತ್ತುವರಿ ಹೆಚ್ಚಾಗಿದ್ದು, ಕಾಡು ಕ್ಷೀಣಿಸುತ್ತಿರುವುದರಿಂದ ವನ್ಯ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಿತ್ಯ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಮಾಜಿ ಸಂಸದ ರಾಜೀವ್ಗೌಡ ಅಭಿಪ್ರಾಯಪಟ್ಟರು.
ಶನಿವಾರ ದಿ ರಿಯಲ್ ಎಲಿಫೆಂಟ್ ಕಲೆಕ್ವೀವ್ ಸಂಸ್ಥೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿರುವ ಲಾಂಟಾನಾದಿಂದ ತಯಾರಿಸಿದ 60 ಆನೆಗಳ ಪ್ರತಿರೂಪಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯ ಜೀವಿ) ಸುಭಾಷ್ ಮಾಳಖೇಡೆ ಮಾತನಾಡಿ ಲಾಂಟಾನಾದಿಂದ ಆನೆಗಳ ಪ್ರತಿರೂಪ ಸಿದ್ಧಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಸೋಲಿಗ ಸಮುದಾಯದ ಕೇತನ್ ಅವರು, ಲಂಟಾನ, ರೋಜವಾರ ಕಳೆ ಗಿಡಗಳನ್ನ ತೆರವು ಮಾಡಿ ಅವನ್ನು ಬಿಸಿ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಇಟ್ಟು ಬಳಿಕ ಅದನ್ನು ಆನೆ ರೂಪಕ್ಕೆ ತರಲಾಗಿದೆ. ಅದನ್ನು ತೆಳುವಾಗಿ ಪಾಲೀಷ್ ಮಾಡಲಾಗಿದೆ.
ಒಂದು ದೊಡ್ಡ ಆನೆಯನ್ನು ಸಿದ್ಧಪಡಿಸಲು ಸುಮಾರು 5 ಮಂದಿ ಸಿಬ್ಬಂದಿ ಬೇಕಿದ್ದು, ಇದು 10 ರಿಂದ 15 ದಿನಗಳಲ್ಲಿ ಆಗಲಿದೆ. ಕೆಲವೊಮ್ಮೆ ತಿಂಗಳವರೆಗೂ ಕೆಲಸ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಯಲ್ಲಪ್ಪರೆಡ್ಡಿ, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸುಭಾಷ್ ಮಾಳಖೇಡೆ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ಜಂಟಿ ನಿರ್ದೇಶಕ (ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್ ) ಡಾ.ಎಂ.ಜಗದೀಶ್, ಉಪ ನಿರ್ದೇಶಕಿ ಕುಸುಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.