ಲ್ಯಾಪ್‌ಟಾಪ್, ಮೊಬೈಲ್ ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿ

KannadaprabhaNewsNetwork |  
Published : Dec 22, 2024, 01:31 AM IST
ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕನೋರ್ವ ಬಿಟ್ಟು ಹೋಗಿದ್ದ ಲ್ಯಾಪ್ ಟಾಪ್‌ನ್ನು ಬಸ್‌ನ ಚಾಲಕ ಹಾಗೂ ನಿರ್ವಾಹಕರು ಹಿಂದುರುಗಿಸಿದರು. | Kannada Prabha

ಸಾರಾಂಶ

ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಂದಾಜು ₹ 70 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ₹15 ಸಾವಿರ ಮೌಲ್ಯದ ಮೊಬೈಲ್‌ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಹುಬ್ಬಳ್ಳಿ:

ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಂದಾಜು ₹ 70 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ₹15 ಸಾವಿರ ಮೌಲ್ಯದ ಮೊಬೈಲ್‌ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಡಿ. 19ರಂದು ಮುಳಬಾಗಿಲಿನಿಂದ ಹುಬ್ಬಳ್ಳಿಗೆ ಬಂದಿರುವ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಹಾವೇರಿ ಜಿಲ್ಲೆಯ ಮೌನೇಶ ಮಾಯಾಚಾರಿ ಎಂಬುವರು ಬೆಂಗಳೂರಿನಿಂದ ಹಾವೇರಿಗೆ ಪ್ರಯಾಣ ಮಾಡಿದ್ದಾರೆ. ಹಾವೇರಿಯಲ್ಲಿ ಇಳಿಯುವಾಗ ಅಂದಾಜು ₹ 70 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಇದ್ದ ಬ್ಯಾಗ್‌ನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದಾರೆ. 2 ಗಂಟೆ ನಂತರ ನೆನಪಾಗಿ ಬಸ್ಸಿನ ಚಾಲಕ ಶ್ರೀರಾಮ ಮತ್ತು ನಿರ್ವಾಹಕ ಮಂಜುನಾಥ ಸಂಪರ್ಕಿಸಿದಾಗ ಲ್ಯಾಪ್‌ಟಾಪ್ ಹಾಗೂ ಬ್ಯಾಗ್‌ ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಚಾಲಕ ಹಾಗೂ ನಿರ್ವಾಹಕರ ಮೂಲಕ ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಇನ್ನೊಂದು ಪ್ರಕರಣದಲ್ಲಿ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹುಬ್ಬಳ್ಳಿಯಿಂದ ಕೆರೂರಿಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರೊಬ್ಬರು ₹ 15 ಸಾವಿರ ಮೌಲ್ಯದ ಮೊಬೈಲ್ ಫೋನ್‌ನ್ನು ಕಳೆದುಕೊಂಡಿದ್ದು ಬಸ್ಸಿನ ಚಾಲಕ ಬಿ.ಜಿ. ವಿಟ್ಟಣ್ಣವರ ಹಾಗೂ ನಿರ್ವಾಹಕಿ ಹೇಮಾ ಮೊರಬ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ವಾರಸುದಾರರಿಗೆ ಹಿಂದುರುಗಿಸಿದ ಚಾಲಕರು ಹಾಗೂ ನಿರ್ವಾಹಕರ ಕಾರ್ಯಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಶ್ಲಾಘಿಸಿದ್ದಾರೆ.

ಈ ವೇಳೆ ಉಪಮುಖ್ಯ ಸಂಚಾರ ವ್ಯವಸ್ಥಾಪಕ ಶಶಿಧರ ಕುಂಬಾರ, ವಿಭಾಗೀಯ ತಾಂತ್ರಿಕ ಎಂಜಿನಿಯರ್ ಪಿ.ವೈ. ಗಡಾದ, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಮಂಜುನಾಥ ಕಟ್ಟಿಮನಿ, ಡಿಪೋ ಮ್ಯಾನೇಜರ್ ಬಿ.ಕೆ. ನಾಗರಾಜ, ಸಿಬ್ಬಂದಿ ಶ್ರೀಶೈಲ ಕುಂಬಾರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ