ಗ್ರಾಮಾಂತರಕ್ಕೆಕಂದಾಯ ಸೇವೆಗಳ ವಿಶೇಷ ಆಂದೊಲನದ ಪ್ರಯೋಜನ ಪಡೆದುಕೊಳ್ಳಿ: ಸಿ.ಎಸ್. ಪೂರ್ಣಿಮಾಸಿ.ಎಸ್. ಪೂರ್ಣಿಮಾ

KannadaprabhaNewsNetwork | Published : May 15, 2024 1:39 AM

ಸಾರಾಂಶ

ರೈತರು ಮತ್ತು ಸಾರ್ವಜನಿಕರಿಗೆ ಆಧಾರ್ ಸೀಡಿಂಗ್, ಎನ್ಪಿಸಿಐ, ಪ್ರೋಟ್ಸ್ ಪರಿಹಾರ, ಬಾಕಿ ಇರುವ ಪೌತಿ ಖಾತೆಗಳ ಅರ್ಜಿ ಸೇರಿದಂತೆ ಇತರ ಸಮಸ್ಯೆಗಳ ಪರಿಹಾರ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡುವುದರ ಜತೆಗೆ ಸ್ಥಳದಲ್ಲಿಯೇ ಬೇಡಿಕೆಯಂತೆ ಕೆಲಸ ಮಾಡಿಕೊಡಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಇತರರಿಗೂ ಮನವರಿಕೆ ಮಾಡಬೇಕು

ಫೋಟೋ- 14ಎಂವೈಎಸ್ 57

ಕೆ.ಆರ್. ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದಲ್ಲಿ ಕಂದಾಯ ಸೇವೆಗಳ ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಗ್ರಾಮಸ್ಥರಿಗೆ ಇಲಾಖೆಯ ಸೇವೆಗಳ ಮಾಹಿತಿ ನೀಡಿದರು.

------------

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕಂದಾಯ ಸೇವೆಗಳ ವಿಶೇಷ ಆಂದೊಲನ ನಡೆಸುತ್ತಿದ್ದು, ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.

ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಕಂದಾಯ ಸೇವೆಗಳ ವಿಶೇಷ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಆಂದೋಲನದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಇಲಾಖೆ ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ ಸೇವೆ ನೀಡಲಿದ್ದಾರೆ ಎಂದರು.

ರೈತರು ಮತ್ತು ಸಾರ್ವಜನಿಕರಿಗೆ ಆಧಾರ್ ಸೀಡಿಂಗ್, ಎನ್ಪಿಸಿಐ, ಪ್ರೋಟ್ಸ್ ಪರಿಹಾರ, ಬಾಕಿ ಇರುವ ಪೌತಿ ಖಾತೆಗಳ ಅರ್ಜಿ ಸೇರಿದಂತೆ ಇತರ ಸಮಸ್ಯೆಗಳ ಪರಿಹಾರ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡುವುದರ ಜತೆಗೆ ಸ್ಥಳದಲ್ಲಿಯೇ ಬೇಡಿಕೆಯಂತೆ ಕೆಲಸ ಮಾಡಿಕೊಡಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಇತರರಿಗೂ ಮನವರಿಕೆ ಮಾಡಬೇಕು ಎಂದು ಕೋರಿದರು.

ಬರ ಪರಿಹಾರ ಬಾರದಿರುವ ರೈತರನ್ನು ಗುರುತಿಸಿ ಅವರಿಗೆ ಸವಲತ್ತು ತಲುಪಿಸಿ ಇದರೊಂದಿಗೆ ಸಮಸ್ಯೆಗಳು ಇದ್ದಲ್ಲಿ ಸ್ಥಳ ಭೇಟಿ ಮಾಡಿ ತ್ವರಿತಗತಿಯಲ್ಲಿ ಪರಿಹಾರ ಸೂಚಿಸಿ ಇತರ ಯೋಜನೆಗಳ ಸದ್ಬಳಕೆ ಬಗ್ಗೆ ಅರಿವು ಮೂಡಿಸಲಿದ್ದು, ಇಂತಹ ಜನಪರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಪ್ರತೀ ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ನಿಗದಿಪಡಿಸಿದ ಗ್ರಾಮಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಸೇವೆ ನೀಡಲಿದ್ದು, ಗ್ರಾಮಸ್ಥರು ಯಾವುದೇ ಅರ್ಜಿ ನೀಡಿದರೂ ಅವುಗಳನ್ನು ಪರಿಶೀಲಿಸಿ ಆದ್ಯತೆಯ ಮೇರೆಗೆ ಸಕಾಲದಲ್ಲಿ ಪರಿಹಾರ ಸೂಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆನಂತರ ಅವರು ಕಸಬಾ ಹೋಬಳಿಯ ಡೆಗ್ಗನಹಳ್ಳಿ, ತಿಪ್ಪೂರು ಮತ್ತು ದೊಡ್ಡೇಕೊಪ್ಪಲು ಗ್ರಾಮಗಳಿಗೆ ತೆರಳಿ ಕಂದಾಯ ಸೇವೆಗಳ ವಿಶೇಷ ಆಂದೋಲನದ ಬಗ್ಗೆ ಜನರಿಗೆ ಅರಿವು ಮೂಡಿಸಿದರು.

ಶಿರಸ್ತೇದಾರ್ ಅಸ್ಲಾಂಭಾಷ, ಗ್ರಾಮ ಆಡಳಿತಾಧಿಕಾರಿ ರಶ್ಮಿ, ಗ್ರಾಮ ಸಹಾಯಕ ನಂಜಯ್ಯ ಮತ್ತು ಕಂದಾಯ ಇಲಾಖೆಯ ಇತರ ಸಿಬ್ಬಂದಿ ಇದ್ದರು.

Share this article