ಕಂದಾಯ ಭೂಮಿ ಪ್ಲಾಂಟೇಷನ್‌ಗಳಿಗೆ ಲೀಸ್‌: ಕಾಫಿ ಬೆಳೆಗಾರರಿಗೆ ಹರ್ಷ

KannadaprabhaNewsNetwork |  
Published : Aug 09, 2024, 12:30 AM IST

ಸಾರಾಂಶ

ಚಿಕ್ಕಮಗಳೂರು, ತಾವು ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ತಮಗೆ ಕೇರಳ ಮಾದರಿ (ಒತ್ತುವರಿ ಮಾಡಿರುವವರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು)ಯಲ್ಲಿ ಗುತ್ತಿಗೆ ನೀಡಬೇಕೆಂಬುದು ರಾಜ್ಯದ ಕಾಫಿ ಬೆಳೆಗಾರರ ಬಹಳ ವರ್ಷದ ಬೇಡಿಕೆ, ಇದು ಈಡೇರುವ ಕಾಲ ಸನ್ನಿಹಿತವಾಗಿದೆ.

ಏಲಕ್ಕಿ, ಕಾಫಿ, ಮೆಣಸು, ರಬ್ಬರ್, ಟೀ ಬೆಳೆಗಳಿಗೆ ಅನ್ವಯ । ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ । 4 ಜಿಲ್ಲೆಗಳಲ್ಲಿ 76,844 ಎಕರೆ ಕಂದಾಯ ಭೂಮಿ ಒತ್ತುವರಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾವು ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ತಮಗೆ ಕೇರಳ ಮಾದರಿ (ಒತ್ತುವರಿ ಮಾಡಿರುವವರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು)ಯಲ್ಲಿ ಗುತ್ತಿಗೆ ನೀಡಬೇಕೆಂಬುದು ರಾಜ್ಯದ ಕಾಫಿ ಬೆಳೆಗಾರರ ಬಹಳ ವರ್ಷದ ಬೇಡಿಕೆ, ಇದು ಈಡೇರುವ ಕಾಲ ಸನ್ನಿಹಿತವಾಗಿದೆ.

ಕಾರಣ ಇದೀಗ ರಾಜ್ಯ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ವಾರ್ಷಿಕ ಒತ್ತುವರಿ ಮಾಡಿರುವವರಿಂದ ಅರ್ಜಿಯನ್ನು ಸಹ ಆಹ್ವಾನಿಸಿದೆ. ಆ. 7 ರಿಂದ 90 ದಿನಗಳೊಳಾಗಿ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ಕಚೇರಿ ಅಥವಾ ನಾಡ ಕಚೇರಿಯನ್ನು ಸಂಪರ್ಕಿಸಬಹುದು. ಎಷ್ಟು ಪ್ರದೇಶ ಒತ್ತುವರಿಯಾಗಿದೆ. ಅದಕ್ಕೆ ಇಂತಿಷ್ಟು ವಾರ್ಷಿಕ ಗುತ್ತಿಗೆ ಮೊತ್ತವನ್ನು ಸ್ಲ್ಯಾಬ್‌ ಮಾದರಿಯಲ್ಲಿ ವಿಧಿಸಿದೆ. ಅಂದರೆ, 1 ರಿಂದ 25 ಎಕರೆವರೆಗೆ ಕಂದಾಯ ಭೂಮಿ ಯನ್ನು ಒತ್ತುವರಿ ಮಾಡಿರುವವರಿಗೆ ಅನುಕೂಲವಾಗಿದೆ. ಗುತ್ತಿಗೆ ಅವಧಿ 30 ವರ್ಷ. ಇದರಿಂದ ಕಾಫಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.

ಬಾಲಸುಬ್ರಹ್ಮಣ್ಯ ವರದಿ ಪ್ರಕಾರ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಒಟ್ಟು 76,844 ಎಕರೆ ಕಂದಾಯ ಭೂಮಿಯನ್ನು ಏಲಕ್ಕಿ, ಕಾಫಿ, ಮೆಣಸು, ರಬ್ಬರ್, ಟೀ ಬೆಳೆಗಾರರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಭೂಮಿಯನ್ನು ತಮಗೆ ಕೇರಳ ಮಾದರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಬೇಕೆಂಬುದು ಕಾಫಿ ಬೆಳೆಗಾರರ ಆಗ್ರಹ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿತ್ತು.2 ಬಜೆಟ್‌ಗಳಲ್ಲೂ ಘೋಷಣೆ: ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರ ಸ್ಪಂದಿಸಿದೆ.

2017ರಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಕೇರಳ ಮಾದರಿಯಲ್ಲಿ ಪ್ಲಾಂಟೇಷನ್ ಬೆಳೆಗಾರರಿಗೆ 10 ಎಕರೆ ವರೆಗೆ ಕಂದಾಯ ಭೂಮಿ ಒತ್ತುವರಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಘೋಷಣೆ ಮಾಡಿದ್ದರು. 2023ರ ಬಜೆಟ್‌ನಲ್ಲಿ ಆಗಿನ ಸಿಎಂ ಬಸವರಾಜ್‌ ಬೊಮ್ಮಾಯಿ 10 ಎಕರೆಯನ್ನು 25 ಎಕರೆಗೆ ಏರಿಸಿ ಘೋಷಣೆ ಮಾಡಿದ್ದರು. ಇದೀಗ ಕಾರ್ಯರೂಪಕ್ಕೆ ಬಂದಿದೆ.--- ಬಾಕ್ಸ್‌ ----ಅನುಕೂಲ ಆಗಿದ್ದು ಹೇಗೆ ?ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಭೂ ಕಬಳಿಕೆ ಕಾಯ್ದೆ 192 (ಎ)ಗೆ ತಿದ್ದುಪಡಿ ತಂದು ಈ ಕಾಯ್ದೆಯಿಂದ ಕೃಷಿ ಭೂಮಿಯನ್ನು ಹೊರಗಿಡಲಾಯಿತು. ಇದರಲ್ಲಿ ಗ್ರಾಮೀಣ ಪ್ರದೇಶದ ಕೃಷಿ ಭೂಮಿ ಜತೆಗೆ ಪ್ಲಾಂಟೇಷನ್ ಭೂಮಿಯನ್ನು ಸಹ ಹೊರಗಿಡಲಾಯಿತು. ಹೀಗೆ ಮಾಡದೇ ಹೋಗಿದ್ದರೆ, ಈವರೆಗಿನ ಯಾವುದೇ ಪ್ರಕ್ರಿಯೆ ನಡೆಸಲು ಆಗುತ್ತಿರಲಿಲ್ಲ, ಕಾಫಿ ಬೆಳೆಗಾರರ ಕನಸು ನನಸು ಆಗುತ್ತಿರಲಿಲ್ಲ.

---ಷರತ್ತುಗಳು:ಕಂದಾಯ ಭೂಮಿಯನ್ನು ಗುತ್ತಿಗೆ ನೀಡಲು ಸರ್ಕಾರ ಕೆಲವು ಷರತ್ತು ಹಾಕಿದೆ.- ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು 2023ರ ಜಾರಿಗೆ ಬಂದ ದಿನಾಂಕಕ್ಕೆ ಅಂತಹ ಕುಟುಂಬ 2005 ಜನವರಿ ಮಾಹೆ ಪೂರ್ವದಿಂದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಷನ್‌ ಬೆಳೆಗಳನ್ನು ಬೆಳೆಯುತ್ತಿರಬೇಕು.

- ಒಂದು ಕುಟಂಬಕ್ಕೆ 25 ಎಕರೆವರೆಗೆ ಮಾತ್ರ ಗುತ್ತಿಗೆ ನೀಡಲಾಗುವುದು.

- 25 ಎಕರೆಗಿಂತ ಮೇಲ್ಪಟ್ಟು ಒತ್ತುವರಿ ಮಾಡಿದ್ದರೆ ಸರ್ಕಾರಕ್ಕೆ ಒಪ್ಪಿಸಬೇಕು.

- 30 ವರ್ಷಗಳ ಗುತ್ತಿಗೆ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಬೇಕು.

- ಗುತ್ತಿಗೆ ಅವಧಿಯಲ್ಲಿ ಗುತ್ತಿಗೆದಾರರು ನಿಧನ ಹೊಂದಿದರೆ ಉಳಿದ ಗುತ್ತಿಗೆ ಅವಧಿಯನ್ನು ಗುತ್ತಿಗೆದಾರರ ಕುಟುಂಬಕ್ಕೆ ಮಾತ್ರ ವರ್ಗಾಯಿಸಲಾಗುತ್ತದೆ.

- ಗುತ್ತಿಗೆ ಪಡೆದ ಭೂಮಿಯನ್ನು ಉಪ ಗುತ್ತಿಗೆ ಅಥವಾ ಪರಭಾರೆ ಮಾಡುವಂತ್ತಿಲ್ಲ.

- ಗುತ್ತಿಗೆ ಜಮೀನು ಪ್ಲಾಂಟೇಷನ್‌ ಬೆಳೆ ಬೆಳೆಯಲು ಮಾತ್ರ ಬಳಸಬೇಕು. ಇತರೆ ಉದ್ದೇಶಕ್ಕೆ ಬಳಸುವಂತ್ತಿಲ್ಲ. ಬ್ಯಾಂಕ್‌ಗಳಿಗೆ ಅಡಮಾನ ಇಡಲು ಅವಕಾಶ ಇಲ್ಲ.

- ಅರಣ್ಯ ವ್ಯಾಪ್ತಿಗೆ ಬರುವ ಯಾವುದೇ ಭೂಮಿಯನ್ನು ಗುತ್ತಿಗೆ ನೀಡಲು ಅವಕಾಶ ಇಲ್ಲ.

----

ಗುತ್ತಿಗೆ ಮೊತ್ತ (ಒಟ್ಟು ವಿಸ್ತೀರ್ಣ) (ಪ್ರತಿ ವರ್ಷ)- 1 ಎಕರೆವರೆಗೆ 1000 ರು.

- 1 ರಿಂದ 5 ಎಕರೆ ವರೆಗೆ 1500

- 5 ರಿಂದ 10 ಎಕರೆ 2000

- 10 ರಿಂದ 15 ಎಕರೆ 2500

- 15 ರಿಂದ 20 ಎಕರೆ 3000

- 20 ರಿಂದ 25 ಎಕರೆ 3500

------------------------------------------ಯಾವ ಜಿಲ್ಲೆಯಲ್ಲಿ ಎಷ್ಟು ಒತ್ತುವರಿ (ಎಕರೆಗಳಲ್ಲಿ)ಹಾಸನ - 29348.23

ಉಡುಪಿ- 398.66

ಚಿಕ್ಕಮಗಳೂರು - 20844.10

ಕೊಡಗು - 26250.94

------------------------------------

ಒಟ್ಟು - 76844.33

---------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ