ಸುರಹೊನ್ನೆ ಜಮೀನಿನ ಮನೆ ಬಳಿ ಚಿರತೆ: ಗ್ರಾಮಸ್ಥರ ಆತಂಕ

KannadaprabhaNewsNetwork |  
Published : Sep 19, 2024, 02:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ನ್ಯಾಮತಿ ತಾಲೂಕಿನ ಸುರಹೊನ್ನೆ- ಯರಗನಾಳ್‌ ರಸ್ತೆಯ ಜಮೀನಿನ ಮನೆ ಮುಂಭಾಗದಲ್ಲಿ ಚಿರತೆಯೊಂದು ಓಡಾಡಿರುವ ದೃಶ್ಯ ಸಿ.ಟಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

- ನ್ಯಾಯಬೆಲೆ ಅಂಗಡಿ ನರಸಿಂಹಪ್ಪರ ಮನೆಯತ್ತ ಬಂದ ಚಿರತೆ

- ಚಿರತೆ ಕಂಡು ಮನೆ ಮೇಲ್ಭಾಗದಲ್ಲಿ ಅಡಗಿ ಬಚಾವಾದ ಸಾಕುನಾಯಿ - - - ನ್ಯಾಮತಿ: ತಾಲೂಕಿನ ಸುರಹೊನ್ನೆ- ಯರಗನಾಳ್‌ ರಸ್ತೆಯ ಜಮೀನಿನ ಮನೆ ಮುಂಭಾಗದಲ್ಲಿ ಚಿರತೆಯೊಂದು ಓಡಾಡಿರುವ ದೃಶ್ಯ ಸಿ.ಟಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ನ್ಯಾಯ ಬೆಲೆ ಅಂಗಡಿ ನಡೆಸುತ್ತಿರುವ ನರಸಿಂಹಪ್ಪ ಎಂಬವರು ಸುರಹೊನ್ನೆ-ಯರಗನಾಳ್‌ ರಸ್ತೆಯಲ್ಲಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಅವರ ಮನೆಯ ಮುಂಭಾಗದಲ್ಲಿ ರಾತ್ರಿ 1 ಗಂಟೆ ಹೊತ್ತಿಗೆ ಚಿರತೆ ಓಡಾಡಿದೆ. ಮನೆಯ ಸಾಕುನಾಯಿ ಚಿರತೆಯನ್ನು ನೋಡಿ ಮನೆ ಮೇಲ್ಭಾಗದಲ್ಲಿ ಅಡಗಿ ಕುಳಿತು ಪ್ರಾಣ ರಕ್ಷಣೆ ಮಾಡಿಕೊಂಡಿದೆ. ಚಿರತೆ ಚಲನವಲನಗಳ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿರತೆ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ನರಸಿಂಹಪ್ಪ ಅವರ ಮನೆಗೆ ಗ್ರಾಮಸ್ಥರು ಬಂದು ಪರಿಶೀಲಿಸಿ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾ ದೃಶ್ಯ ನೋಡಿ, "ನಿಮ್ಮ ಅದೃಷ್ಟ ಚೆನ್ನಾಗಿದೆ, ಪ್ರಾಣಾಪಾಯದಿಂದ ಪಾರಾಗಿದ್ದೀರಿ " ಎಂದು ಹೇಳಿದ್ದಾರೆ.

ಮೆಕ್ಕೆಜೋಳ ಬೆಳೆ ಕಟಾವು ಮಾಡಲು ಕೆಲ ಸಮಯ ಬೇಕಾಗಿದೆ. ಚಿರತೆ ಓಡಾಡಿರುವ ಸಿಸಿ ಟಿವಿ ದೃಶ್ಯ ಪರಿಶೀಲಿಸಿ, ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯುವಂತೆ ಮನವಿ ಮಾಡಲಾಗಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯರಗನಾಳ್‌ ಗ್ರಾಮ ಮಧ್ಯ ಭಾಗದ ಉಜ್ಜನಿಮಟ್ಟಿಯಲ್ಲಿ ಚಿರತೆ ಸೆರೆಗಾಗಿ ಬೋನ್‌ ಅಳವಡಿಸಲಾಗಿದೆ.

ಚಿರತೆ ಸೆರೆ ಹಿಡಿಯುವವರೆಗೂ ಸಾರ್ವಜನಿಕರು, ರೈತರು ಒಬ್ಬಂಟಿಯಾಗಿ ಓಡಾಡದಂತೆ ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಕಿಶೋರ್‌ ನಾಯ್ಕ ಜನರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಉಪವಲಯ ಅರಣ್ಯಾಧಿಕಾರಿ ಬರ್ಕತ್‌ ಅಲಿ, ಗಸ್ತು ಅರಣ್ಯ ಪಾಲಕರಾದ ಅಂಜಲಿ ಇದ್ದರು.

ಕೆಲ ತಿಂಗಳಿಂದ ಕುದರೆಕೊಂಡ, ಮಲ್ಲಿಗೇನಹಳ್ಳಿ, ಬೆಳಗುತ್ತಿ, ಆರುಂಡಿ, ಕೆಂಚಿಕೊಪ್ಪ, ಯರಗನಾಳ್‌, ತೀರ್ಥರಾಮೇಶ್ವರ ಗ್ರಾಮಗಳಲ್ಲಿ ಚಿರತೆ ಓಡಾಡಿರುವ ದೂರುಗಳು ಬರುತ್ತಿದ್ದವು. ಈಗ ಸುರಹೊನ್ನೆಯ ಮನೆ ಮುಂಭಾಗದಲ್ಲಿ ಚಿರತೆ ಓಡಾಡಿರುವುದು ದೂರಿಗಳಿಗೆ ಸಾಕ್ಷಿಯಾಗಿದೆ.

- - - (ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ