ಭತ್ತಕ್ಕೆ ಹೆಚ್ಚುವರಿ ಬೆಂಬಲ ಬೆಲೆ ನೀಡಲಿ : ಕುರುಬೂರು ಶಾಂತಕುಮಾರ

KannadaprabhaNewsNetwork | Published : Nov 1, 2024 12:08 AM

ಸಾರಾಂಶ

Let additional support price be given for paddy: Kuruburu Shantakumar

-ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು

------

ಕನ್ನಡಪ್ರಭ ವಾರ್ತೆ ಸುರಪುರ

ಭತ್ತಕ್ಕೆ 500 ರು.ಗಳ ಹೆಚ್ಚುವರಿ ಬೆಂಬಲ ಕೇಂದ್ರ ಸರ್ಕಾರ ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭತ್ತಕ್ಕೆ 2320 ರು.ಗಳ ಬೆಂಬಲ ಬೆಲೆ ನಿಗದಿ ಮಾಡಿರುವುದು ನ್ಯಾಯಸಮ್ಮತವಲ್ಲ. ರಾಜ್ಯ ಸರ್ಕಾರ ಹೆಚ್ಚುವರಿ 500 ರು.ಗಳ ಪ್ರೋತ್ಸಾಹಧನ ನೀಡಬೇಕು, ತಕ್ಷಣವೇ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಗುಲ್ಬರ್ಗ ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ 7300 ರು.ಗಳ ಖರೀದಿಸುತ್ತಾರೆ. ಜಿಲ್ಲೆಯಲ್ಲಿಯೂ ಕೂಡಲೇ ಆರಂಭಿಸಬೇಕು. ರೈತರ ಶೋಷಣೆ ಮಾಡುತ್ತಿರುವ ದಳ್ಳಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಪಿಎಂಸಿಗಳಲ್ಲಿ ಮಾರಾಟ ಮಾಡುವ ರೈತರ ಉತ್ಪನ್ನಗಳಿಗೆ ದಳ್ಳಾಳಿಗಳು ಶೇ.10 ರಷ್ಟು ಕಮಿಷನ್, ವೇಸ್ಟೇಜ್ ಎಂದು ಎರಡ್ಮೂರು ಕೆಜಿ ತೆಗೆದುಕೊಳ್ಳಬಾರದು ಎಂಬುದಾಗಿ ಕಾನೂನು ನಿಯಮವಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಜಮೀನುಗಳನ್ನು ವಕ್ಫ್‌ ಬೋರ್ಡ್ ಆಸ್ತಿಗೆ ಪರಭಾರೆ ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಸರ್ಕಾರಕ್ಕೆ ಎಚ್ಚರಿಕೆ ನೋಟಿಸ್ ನೀಡಿದ ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಮರಿಲಿಂಗಪ್ಪಗೌಡ ಅಡ್ಡೊಡಗಿ, ಕೊಟ್ರೇಶ್ ಚೌಧರಿ, ಶಿವಶರಣಪ್ಪ ಸಾಹುಕಾರ್, ಹೈಯಾಳ ಮಲ್ಲನಗೌಡ, ಹತ್ತಳ್ಳಿ ದೇವರಾಜ್ ಇದ್ದರು.

----

31ವೈಡಿಆರ್‌6 : ಸುರಪುರ ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಮಾತನಾಡಿದರು.

Share this article