ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ವತಿಯಿಂದ ಎಸ್ಡಿಎಂ ಉದ್ಯಮಾಡಳಿತ ಕಾಲೇಜಿನ ಎಂಬಿಎ ವಿಭಾಗದ ಸಹಯೋಗದಲ್ಲಿ ಗುರುವಾರ ಎಸ್ಡಿಎಂ ಕಾಲೇಜಿನಲ್ಲಿ ಸ್ವಚ್ಛ ಜನಸಂಪರ್ಕ ಅಭಿಯಾನ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು‘ಸ್ವಚ್ಛತೆ’ಯನ್ನು ಪೂಜೆ ಎನ್ನುವ ದೃಷ್ಟಿಕೋನಕ್ಕೆ ಬದಲಾಯಿಸಬೇಕು, ಇದೇ ಉದ್ದೇಶವನ್ನಿಟ್ಟುಕೊಂಡು ರಾಮಕೃಷ್ಣ ಮಿಷನ್ 5 ವರ್ಷಗಳ ಕಾಲ ನಿರಂತರವಾಗಿ ಪ್ರತಿ ವಾರ ಸ್ವಚ್ಛತಾ ಅಭಿಯಾನ ಆಯೋಜಿಸಿ ಯಶಸ್ವಿಯಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಹೇಳಿದರು.ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ವತಿಯಿಂದ ಎಸ್ಡಿಎಂ ಉದ್ಯಮಾಡಳಿತ ಕಾಲೇಜಿನ ಎಂಬಿಎ ವಿಭಾಗದ ಸಹಯೋಗದಲ್ಲಿ ಗುರುವಾರ ಎಸ್ಡಿಎಂ ಕಾಲೇಜಿನಲ್ಲಿ ಸ್ವಚ್ಛ ಜನಸಂಪರ್ಕ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರಲ್ಲಿ ಅದ್ಭುತ ಶಕ್ತಿ ಇದೆ. ಯುವ ಸಮುದಾಯ ಮನಸ್ಸು ಮಾಡಿದರೆ ದೇಶದ ಇನ್ನಷ್ಟುಎತ್ತರಕ್ಕೇರಲು ಸಾಧ್ಯ. ಸಾಮಾಜಿಕ ಪ್ರಜ್ನೆಯಿಂದ ಮಾತ್ರ ಅದರನ್ನು ನಿರೀಕ್ಷಿಸಬಹುದು. ಪ್ರತಿಯೊಬ್ಬರಿಗೂ ಸಮಾಜದ ಋುಣದಿಂದಲೇ ಬದುಕುತ್ತಿದ್ದಾರೆ ಎಂದರು.ದಿ ಓಷಿಯನ್ ಪರ್ಲ್ಸ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಮಾತನಾಡಿ, ಜೀವರಾಶಿಗಳಲ್ಲಿ ಶ್ರೇಷ್ಠನಾಗಿದ್ದ ಮಾನವ ಇಂದು ಮೂಢನಾಗಿ ವರ್ತಿಸುತ್ತಿದ್ದಾನೆ. ಪ್ರಕೃತಿ ಸಂರಕ್ಷಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮ್ಮ ಭವಿಷ್ಯಕ್ಕೆ ಮಾರಕವಾಗಲಿದೆ. ಜೀವನ ನಡೆಸಲು ಎಲ್ಲವೂ ಇದ್ದು, ಉತ್ತಮ ಪ್ರಕೃತಿ ಇಲ್ಲದಿದ್ದರೆ ಏನಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಯಥಾವತ್ ಹಾಗೂ ಇದಕ್ಕಿಂತ ಚೆನ್ನಾಗಿ ಬಿಟ್ಟು ಹೋಗುವುದು ಅಗತ್ಯ. ಈ ನಿಟ್ಟಿನಲ್ಲಿ ಅಭಿಯಾನ ನಮಗೊಂದು ಜವಾಬ್ದಾರಿ ನೀಡಿದೆ ಎಂದರು.
ಎಂಆರ್ಪಿಎಲ್- ಒಎನ್ಜಿಸಿ ಟೀಮ್ ಸಿಎಸ್ಆರ್ ಮುಖ್ಯಸ್ಥ ಸ್ಟೀವನ್ ಪಿಂಟೋ ಮಾತನಾಡಿ, ರಾಮಕೃಷ್ಣ ಮಠದ ಸ್ವಚ್ಛತಾ ಅಭಿಯಾನದ ಆರಂಭದ ದಿನದಿಂದಲೂ ಎಂಆರ್ಪಿಎಲ್- ಒಎನ್ಜಿಸಿ ಕೈಜೋಡಿಸುತ್ತಿದೆ ಎಂದರು.
ಕಾಲೇಜಿನ ನಿರ್ದೇಶಕಿ ಡಾ. ಸೀಮಾ ಎಸ್.ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಸ್ವಚ್ಛ ಭಾರತ್ ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ರಮ್ಯಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ನಿವ್ಯಾ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.