ಶಿರಾಳಕೊಪ್ಪ: ಹೆಣ್ಣು ಮಕ್ಕಳು ಅಡಿಗೆ ಮನೆಗೆ ಸೀಮಿತವಾಗದೇ ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯಬೇಕು. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ.೩೫ ರಷ್ಟು ಮೀಸಲಾತಿಕೊಟ್ಟು ಮಹಿಳೆಯರನ್ನು ಮುಂದೆ ತರಲು ದೇಶ ಮುಂದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶ್ರೀ ಕ್ಷೇತ್ರ ‘ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವ ಸಹಾಯ ಸಂಘಗಳ ಒಕ್ಕೂಟ ಪ್ರಸಕ್ತ ಸಾಲಿನಲ್ಲಿ ಹಣಕಾಸಿನ ವ್ಯವಹಾರ ಮಾಡಿ ನಾಲ್ಕುವರೆ ಕೋಟಿ ರು. ಲಾಭ ಮಾಡಿರುವುದನ್ನು ಕೇಳಿ ಆಶ್ಚರ್ಯವಾಗಿದೆ. ಹಾಗೆಯೇ ಶಿರಾಳಕೊಪ್ಪ ವಲಯದಲ್ಲಿ ೭೫ ಲಕ್ಷರು ಲಾಭ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.
ಸದಸ್ಯರು ಸಾಲಗಾರರಾಗದೇ ಸಮಯಕ್ಕೆ ಸರಿಯಾಗಿ ಸಾಲಕಟ್ಟಿ, ೫೫ ಸಾವಿರ ಮಹಿಳೆಯರು ಸಂಘದ ಮುಖಾಂತರ ಗುರುತಿಸಿಕೊಂಡಿದ್ದೀರಿ. ಯಾರೊಬ್ಬರೂ ಸಂಘಕ್ಕೆ ಮೋಸಮಾಡದೇ ಸಂಘಕ್ಕೆ ಕೆಟ್ಟ ಹೆಸರನ್ನು ತರುವ ಕೆಲಸ ಮಾಡಬಾರದು ಎಂದು ಹೇಳಿದರು.ಪೂಜ್ಯ ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದದಿಂದ ಇಂದು ಗ್ರಾಮಾಭಿವೃದ್ಧಿ ಸಂಸ್ಥೆ ನಿರೀಕ್ಷೆ ಮೀರಿ ಬೆಳೆದಿದೆ ಎಂದ ಅವರು, ಇಂದು ನಾವು ಸಂಸದರಾಗಲು, ಎತ್ತರಕ್ಕೆ ಬೆಳೆಯಲು ಧರ್ಮಸ್ಥಳ ಮಂಜುನಾಥಸ್ವಾಮಿ ಹಾಗೂ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದವೇ ಕಾರಣ ಎಂದರು.ಬಿ.ಸಿ.ಟ್ರಸ್ಟ್ ನಿರ್ದೇಶಕ ಬಾಬುನಾಯ್ಕ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬೆಳೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.
ಶಿರಾಳಕೊಪ್ಪ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೇದಿಕೆ ಮೇಲೆ ಜಿಲ್ಲಾ ಜನಜಾಗೃತಿ ಸದಸ್ಯ ಚೆನ್ನವೀರಶೆಟ್ಟಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ, ಪುರಸಭೆ ಸದಸ್ಯ ಮಹಬಲೇಶ್, ಪಪಂ ಮಾಜಿ ಸದಸ್ಯ ಸಮೀಉಲ್ಲಾ, ಜಿಲ್ಲಾ ಜನಜಾಗೃತಿ ಸದಸ್ಯ ಚಂದ್ರಶೇಖರ ಮಳವಳ್ಳಿ ಮತ್ತಿತರರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಒಕ್ಕಕೂಟಗಳ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.