ಪತ್ರಿಕಾಗೋಷ್ಠಿಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಒತ್ತಾಯಕನ್ನಡಪ್ರಭ ವಾರ್ತೆ ಹೊಸಪೇಟೆ
ಅಕ್ರಮ ಗಣಿಗಾರಿಕೆಯಿಂದ ಜರ್ಜರಿತವಾಗಿರುವ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಕೆಎಂಇಆರ್ಸಿಯ ₹30 ಸಾವಿರ ಕೋಟಿ ಸದ್ಬಳಕೆ ಮಾಡಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಕಟ್ಟಡ ನಿರ್ಮಾಣ, ಕಮಿಷನ್ ದಂಧೆ ಕಾಮಗಾರಿಗಳನ್ನು ನಡೆಸಲು ಮುಂದಾಗುತ್ತಿದೆ. ಸರ್ಕಾರದ ಕಾರ್ಯ ಯೋಜನೆಗಳಲ್ಲಿ ಜನರ ಬದುಕು ಕಾಣುತ್ತಿಲ್ಲ ಎಂದು ದೂರಿದರು.
ಗಣಿ ಬಾಧಿತ ಪ್ರದೇಶಗಳ ಜನರ ಬದುಕು ಹೇಗೆ ಜರ್ಜರಿತವಾಗಿದೆ. ಏನೆಲ್ಲ, ಹಾನಿಯಾಗಿದೆ. ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಸರ್ಕಾರ ಹಾಗೂ ಇಲಾಖೆಗಳು ಅಧ್ಯಯನ ನಡೆಸಿಲ್ಲ. ಕೆಲ ಪ್ರಭಾವಿ ಶಾಸಕರ ಮಾತಿಗೆ ಮಣಿದು ಕಾಮಗಾರಿ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗಣಿ ಬಾಧಿತ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್ ಸಲಹೆಯಂತೆ ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯ, ಶಿಕ್ಷಣ, ಮಹಿಳೆಯರು, ಮಕ್ಕಳ ಹಕ್ಕುಗಳು, ಕುಡಿಯುವ ನೀರು, ಕೃಷಿ ಕಾರ್ಮಿಕರಿಗೆ ಉದ್ಯೋಗಕ್ಕೆ ಆದ್ಯತೆ ದೊರೆಯಬೇಕು. ಕೆಎಂಇಆರ್ಸಿ ಮೊದಲು ಗಣಿ ಬಾಧಿತ ಪ್ರದೇಶದಲ್ಲಿನ ಯೋಜನೆಗಳಿಗೆ ಆದ್ಯತೆ ನೀಡಬೇಕು. ಬಳಿಕವಷ್ಟೇ ಅಪ್ರತ್ಯಕ್ಷವಾಗಿ ಬಾಧಿತವಾದ ಪ್ರದೇಶದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು. ಕೆಎಂಇಆರ್ಸಿ ಪೌಷ್ಟಿಕತೆ ಕಾರ್ಯಕ್ರಮವನ್ನು ಆದ್ಯತಾನುಸಾರ ನಡೆಸಬೇಕು. ಗಣಿ ಬಾಧಿತ ಪ್ರದೇಶದಲ್ಲಿನ ಮಕ್ಕಳು ಅಸ್ತಮಾನದಿಂದ ಬಳಲುತ್ತಿದ್ದಾರೆ. ಸಂಡೂರು ತಾಲೂಕಿನಲ್ಲಿ ನಡೆದ ಅಧ್ಯಯನದಿಂದ ದೃಢಪಟ್ಟಿದೆ. ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಇದಕ್ಕೆ ಪೂರಕವಾಗಿ ಜಾನುವಾರುಗಳಿಗೆ ಮೇವು ಒದಗಿಸಲು ಕ್ರಮ ವಹಿಸಬೇಕು ಎಂದರು.
ಗಣಿ ಬಾಧಿತ ಪ್ರದೇಶದಲ್ಲಿ ಸರ್ಪೇಸ್ ವಾಟರ್ ಆಧರಿತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು. ಕೃಷಿ ಅರಣ್ಯಗಾರಿಕೆಗೆ ಉತ್ತೇಜನ ನೀಡಬೇಕು ಎಂದರು.ಗಣಿ ಬಾಧಿತ ಪ್ರದೇಶದಲ್ಲಿ ದಿನಗೂಲಿ ₹600ಕ್ಕೆ ಏರಿಸಬೇಕು. ಜೊತೆಗೆ 250 ದಿನ ಕೂಲಿ ಒದಗಿಸಬೇಕು. ಕೆಎಂಇಆರ್ಸಿ ಹಣವನ್ನು ಬಳಕೆ ಮಾಡಬೇಕು. ಕೆಎಂಇಆರ್ಸಿಯಲ್ಲಿ ನೌಕರರನ್ನು ನೇಮಿಸಿ ಸಂಬಳ ನೀಡುವುದು ಸರಿಯಲ್ಲ, ಗಣಿಬಾಧಿತ ಪ್ರದೇಶದ ಶಾಲೆಗಳಲ್ಲಿ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಒದಗಿಸುವ ಕಾರ್ಯ ಆಗಬೇಕು. ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಮಾಡಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಸಿಕ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.
ಗಣಿಬಾಧಿತ ಪ್ರದೇಶದ ಮಹಿಳೆಯರಿಗೆ ವೃತ್ತಿ ತರಬೇತಿ, ಕೌಶಲ್ಯ ತರಬೇತಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕು. ಜೊತೆಗೆ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು. ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯಗಳ ನಿರ್ಮಿಸಬೇಕು. ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಆಯೋಜಿಸಬೇಕು. ಸಂಡೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.ಈ ಭಾಗದಲ್ಲಿ ಈಗ ಜಿಂದಾಲ್ ಕಾರ್ಖಾನೆಯವರೇ ಹೊಸದಾಗಿ ಗಣಿ ಗುತ್ತಿಗೆಗಳನ್ನು ಪಡೆಯುತ್ತಿದ್ದಾರೆ. ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತಿದೆ. ಈ ಕಾರ್ಖಾನೆಯಿಂದ ಹಲವು ಲೋಪಗಳಾಗಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಿ ಹೋರಾಟ ನಡೆಸಲಾಗುವುದು ಎಂದರು.
ಜನಸಂಗ್ರಾಮ ಪರಿಷತ್ನ ಅಧ್ಯಕ್ಷ ಟಿ.ಎಂ. ಶಿವಕುಮಾರ, ಮುಖಂಡರಾದ ಕೆ. ಕಲೀಂ, ವೆಂಕಟರಮಣ, ನಾಗರಾಜ ಮತ್ತಿತರರಿದ್ದರು.