ಸಾಲ ನೀಡಿಕೆ-ವಸೂಲಾತಿ ಕಾನೂನುಬದ್ಧ ಇರಲಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

KannadaprabhaNewsNetwork |  
Published : Feb 13, 2025, 12:49 AM IST
ಪೊಟೋ: 12ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಹಣಕಾಸು ಮತ್ತು ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿ ಮತ್ತು ಗಿರವಿ, ಲೇವಾದೇವಿಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಯಾವುದೇ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವರಿಗೆ ಈ ಮುಂಚೆ ಇರುವ ಸಾಲಗಳ ಬಗ್ಗೆ ಪರಿಶೀಲಿಸಿ ನೀಡಬೇಕು. ಸಾಲ ನೀಡಿದ ಬಳಿಕ ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಮೈಕ್ರೋ ಫೈನಾನ್ಸ್, ಸಾಲ ಏಜೆನ್ಸಿ, ಗಿರವಿದಾರರ ಜತೆ ಸಭೆ । ಹಣ ಹಿಂಪಡೆಯುವಲ್ಲಿ ಒತ್ತಡ ಸಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಯಾವುದೇ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವರಿಗೆ ಈ ಮುಂಚೆ ಇರುವ ಸಾಲಗಳ ಬಗ್ಗೆ ಪರಿಶೀಲಿಸಿ ನೀಡಬೇಕು. ಸಾಲ ನೀಡಿದ ಬಳಿಕ ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಣಕಾಸು ಮತ್ತು ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿ ಮತ್ತು ಗಿರವಿ, ಲೇವಾದೇವಿಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಸಾಮಾನ್ಯ ಜನರಿಗೆ ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ತುರ್ತು ಪರಿಸ್ಥಿತಿಯಲ್ಲಿ ಸುಲಭವಾಗಿ ಸಾಲ ನೀಡುತ್ತ ಸಹಕರಿಸುತ್ತ ಬಂದಿದ್ದಾರೆ. ನಾವು ನಿಮ್ಮ ವಿರುದ್ದ ಇಲ್ಲ. ಆದರೆ, ಒಬ್ಬ ಮಧ್ಯಮ ವರ್ಗದ ವ್ಯಕ್ತಿಗೆ 4 ಕ್ಕಿಂತ ಹೆಚ್ಚು ಬಾರಿ ಸಾಲ ನೀಡುವಂತಿಲ್ಲ. ಒಬ್ಬ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವನ ಹಿಂದಿನ ಸಾಲಗಳ ಬಗ್ಗೆ ಮಾಹಿತಿ ಪಡೆದು ನೀಡಬೇಕು. ಹೆಚ್ಚು ಬಾರಿ ಸಾಲ ನೀಡಿ ಆತನಿಗೆ ಹೊರೆಯಾಗಿ, ಏನಾದರೂ ಹೆಚ್ಚು ಕಮ್ಮಿ ಆದರೆ ನಿಮಗೇ ಸಮಸ್ಯೆಯಾಗುತ್ತದೆ. ಆದ್ದರಿಂದ ಅನವಶ್ಯಕ ಸಮಸ್ಯೆ ತಂದುಕೊಳ್ಳದೇ, ಸಾಲ ಕುರಿತಾದ ಪೂರ್ವಾಪರ ಪರಿಶೀಲಿಸಿ ಸಾಲ ನೀಡಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್, ಇತರೆ ಹಣಕಾಸು ಸಂಸ್ಥೆಗಳ ವಿಷಯದಲ್ಲಿ ಅಂತಹ ಘಟನೆಗಳು, ಸಮಸ್ಯೆಗಳು ಇದುವರೆಗೆ ವರದಿಯಾಗಿಲ್ಲ. ಸಾಲ ನೀಡುವಾಗ ಮತ್ತು ವಸೂಲು ಮಾಡುವಾಗ ನಿಯಮಾವಳಿಗಳನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಇನ್ನೂ ಸಹಕಾರ ಸಂಘಕ್ಕೆ ನೋಂದಣಿಯಾಗದ ಗಿರವಿದಾರರು ತಕ್ಷಣ ನೋಂದಣಿಯಾಗಬೇಕು. ಸಹಕಾರ ಸಂಘಗಳ ಉಪ ನಿಬಂಧಕರು ಈ ಕುರಿತು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಓರ್ವ ವ್ಯಕ್ತಿಗೆ ಪದೇ ಪದೇ ಸಾಲ ನೀಡಿ ಹೊರೆ ಮಾಡಬಾರದು. ಸಾಮರ್ಥ್ಯ ನೋಡಿ ಸಾಲ ನಿಡಬೇಕು. ನಿಮಗೆ ಕಂಪನಿಗಳು ಟಾರ್ಗೆಟ್ ನೀಡಿದ್ದಾರೆಂದು ಜನರಿಗೆ ಒತ್ತಡ ಹಾಕಬೇಡಿ. ವಸೂಲಾತಿ ವೇಳೆ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಆ ವೇಳೆಯಲ್ಲಿ ಸಾಲ ವಸೂಲಾತಿಗೆ ಹೋಗಬಾರದು. ಮನೆಯ ಹೆಣ್ಣುಮಕ್ಕಳು, ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವಮಾನ, ದಬ್ಬಾಳಿಕೆ, ದೌರ್ಜನ್ಯ ಮಾಡಬಾರದು. ಒಂದು ವೇಳೆ ಇದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಸುಲಿಗೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕ್ರಿಮಿನಲ್ ಹಿನ್ನೆಲೆ ಇರುವಂತಹ ವ್ಯಕ್ತಿಗಳನ್ನು ಸಾಲ ವಸೂಲಾತಿಗೆ ನೇಮಿಸಿಕೊಳ್ಳಬಾರದು. ನಿಯಮಾನುಸಾರ, ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕೆಂದು ಸೂಚಿಸಿದ ಅವರು ಸಾಲ ವಸೂಲಾತಿಗೆ ಪೊಲೀಸರು ಬೆಂಬಲ ಕೂಡ ಇದ್ದು, ಕಾನೂನು ರೀತಿಯಲ್ಲಿ ನಮ್ಮ ಸಹಾಯ ಪಡೆಯಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಸಹಕಾರ ಸಂಘಗಳ ಇಲಾಖೆಯ ಉಪನಿಬಂಧಕರಾದ ನಾಗಭೂಷಣ ಕಲ್ಮನೆ, ನಬಾರ್ಡ್ ಡಿಡಿಎಂ ಶರತ್, ಎಲ್ ಡಿ ಎಂ ಚಂದ್ರಶೇಖರ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳ ಅಧಿಕಾರಿ, ಪದಾಧಿಕಾರಿಗಳು, ಗಿರವಿದಾರರ ಸಂಘದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!