ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ
ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿವಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿ ಆಗಬೇಕು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ಅವರು ಕೊರಟಗೆರೆ ತಾಲೂಕು ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೆದ್ಮೇನಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮೋದಿ ಮತ್ತೇ ಪ್ರಧಾನಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.
ನರೇಂದ್ರ ಮೋದಿ ಮತ್ತೇ ಪ್ರಧಾನಿ ಆದರೆ ನಮ್ಮ ದೇಶವು ಅಭಿವೃದ್ಧಿಯ ಪಥದತ್ತ ಸಾಗಲಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾನು ಅವರ ಪರವಾಗಿ ಪ್ರಚಾರ ಮಾಡ್ತೀನಿ. ನನಗೇ ದೇಶದ ಭವಿಷ್ಯ ಮುಖ್ಯ ಅಷ್ಟೇ ಎಂದು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸೋಮಣ್ಣ ತಿಳಿಸಿದರು.ಭಕ್ತರ ಸಂಖ್ಯೆಯೇ ಸಾಕ್ಷಿ :
ಮೈಸೂರಿನ ನಂಜನಗೂಡು ನಂಜುಂಡೇಶ್ವರ ದೇವಾಲಯ ರೀತಿಯಲ್ಲೇ ಗೆದ್ಮೇನಹಳ್ಳಿಯ ಶ್ರೀ ಹೊಳೆ ನಂಜುಂಡೇಶ್ವರ ದೇವಾಲಯ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಮಹಾಶಿವನಿಗೆ ಪ್ರಿಯವಾದ ಹಬ್ಬ ಮಹಾಶಿವರಾತ್ರಿ ದಿನದಂದು ಶ್ರೀಕ್ಷೇತ್ರದಲ್ಲಿ ನೆರೆದಿರುವ ಭಕ್ತರ ಸಂಖ್ಯೆಯೇ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.ಶ್ರೀ ಹೊಳೆ ನಂಜುಂಡೇಶ್ವರ ಸ್ವಾಮಿಯ ಪವಿತ್ರ ಪುಣ್ಯಕ್ಷೇತ್ರವು ನಂಜನಗೂಡು ರೀತಿಯಲ್ಲಿ ಪ್ರಸಿದ್ಧಿ ಪಡೆಯಲಿದೆ. ದೇವರ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಆಗಮನ ನೋಡಿದರೇ ದೈವದ ನಿಜರೂಪ ಇಲ್ಲೇ ತಿಳಿಯುತ್ತದೆ. ಆಡಂಬರ ಇಲ್ಲದೇ ಪ್ರಾರ್ಥನೆ ಸಲ್ಲಿಸುವ ಭಕ್ತರಿಗೆ ಒಲಿಯುವ ಶ್ರೀ ಕ್ಷೇತ್ರಕ್ಕೆ ನೂರಾರು ವರ್ಷದ ಇತಿಹಾಸವಿದೆ ಎಂದರು.
ಹೊಳೇ ನಂಜುಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ಮಾತನಾಡಿ, ಮಹಾಶಿವರಾತ್ರಿ ಪ್ರಯುಕ್ತ ನಂಜುಂಡೇಶ್ವರ ಸ್ವಾಮಿ ವಿಶೇಷ ಹೂವಿನ ಅಲಂಕಾರ, ವಿಶೇಷಪೂಜೆ, ಹೂಮಹವನ, ಟ್ರಸ್ಟ್ನಿಂದ ಅನ್ನದಾಸೋಹ ಮತ್ತು ಭಕ್ತಾಧಿಗಳಿಂದ ಪಾನಕ ವಿತರಣೆ ನಡೆಯಲಿದೆ. ಪವಿತ್ರಪುಣ್ಯ ಶ್ರೀಕ್ಷೇತ್ರಕ್ಕೆ ನೂರಾರು ವರ್ಷದ ಇತಿಹಾಸವಿದೆ. ಸ್ವಾಮಿಯ ದರ್ಶನ ಪಡೆಯುವ ಭಕ್ತರಿಗೆ ಶುಭವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್. ಬಸವರಾಜು, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ಮಾಜಿ ಅಧ್ಯಕ್ಷ ಪವನಕುಮಾರ್, ಬಿಜೆಪಿ ಮುಖಂಡ ಅನಿಲ್ಕುಮಾರ್, ಕೋಳಾಲ ಗ್ರಾಪಂ ಅಧ್ಯಕ್ಷ ಶ್ರೀನಿವಾಸಮೂರ್ತಿ, ಯುವಧ್ಯಕ್ಷ ಗುರುಧತ್, ಮುಖಂಡರಾದ ಶಿವಕುಮಾರ್, ಕೌಶಿಕ್, ಗಿರೀಶ್, ರಾಜೇಂದ್ರ, ರವಿಕುಮಾರ್, ಉಮೇಶ್, ಶಿವರುದ್ರಯ್ಯ, ದೇವರಾಜು ಸೇರಿದಂತೆ ಇತರರು ಇದ್ದರು.
ಪ್ರಸಾದ, ಪಾನಕ ವಿತರಣೆಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೋಳಾಲದ ಗೇದ್ಮೆನಹಳ್ಳಿ ಶ್ರೀನಂಜುಂಡೇಶ್ವರ ಸ್ವಾಮಿಯ ದರ್ಶನಕ್ಕೆ ಕೊರಟಗೆರೆ, ಮಧುಗಿರಿ, ತುಮಕೂರು ಸೇರಿದಂತೆ ಹತ್ತಾರು ತಾಲೂಕಿನಿಂದ ೫ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದರ್ಶನ ಪಡೆದರು. ಟ್ರಸ್ಟ್ನಿಂದ ಭಕ್ತರಿಗೆ ಸಕಲಸೌಲಭ್ಯ ಕಲ್ಪಿಸಲಾಗಿತ್ತು. ಜಾತ್ರೆಯ ರೀತಿಯಲ್ಲಿ ಶ್ರೀಕ್ಷೇತ್ರದಲ್ಲಿ ಸಡಗರ ಸಂಭ್ರಮದಿಂದ ಪ್ರಸಾದ ಮತ್ತು ಪಾನಕವನ್ನು ಭಕ್ತಾಧಿಗಳಿಗೆ ವಿತರಣೆ ಮಾಡಲಾಯಿತು.